ಹೊಸದುರ್ಗ: ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮತ್ತು ಖನಿಜ ನಿಗಮ ಅಧ್ಯಕ್ಷ ಎಸ್.ಲಿಂಗಮೂರ್ತಿ ನಡುವೆ ಬಹಿರಂಗ ಜಟಾಪಟಿ ನಡೆದಿದ್ದು, ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಹೊಸದುರ್ಗ ತಾಲೂಕಿನ ಅಭಿವೃದ್ಧಿ ಕುರಿತು ಚಚಿರ್ಸಲು ತಾಪಂ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ತ್ರೈಮಾಸಿಕ ಕೆಡಿಪಿ ಸಭೆ ಬಿಜೆಪಿ ಮನೆಯಲ್ಲಿನ ಭಿನ್ನಮತ ಪ್ರದರ್ಶನಕ್ಕೆ ವೇದಿಕೆಯಾಯಿತು. ಶಾಸಕ ಗೂಳಿಹಟ್ಟಿ ಶೇಖರ್ ಅಧ್ಯಕ್ಷತೆಯಲ್ಲಿ ಇಲಾಖಾವಾರು ಪ್ರಗತಿ ಕಾರ್ಯ ಪರಿಶೀಲನೆ ನಡೆಯುತ್ತಿದ್ದ ವೇಳೆ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ ದಿಢೀರ್ ಆಗಮಿಸಿದರು. ಈ ವೇಳೆ ಶಾಸಕರು, ಈ ಸಭೆಯ ಆಹ್ವಾನಿತರ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಪಟ್ಟಿ ಪರಿಶೀಲಿಸುವಂತೆ ತಾಪಂ ಇಒಗೆ ಸೂಚಿಸಿದರು. ಈ ವೇಳೆ ಇಬ್ಬರು ನಾಯಕರ ನಡುವೆ ಜಟಾಪಟಿ ನಡೆಯಿತು.
ತಾಲೂಕು ಆಡಳಿತ ಹಾಗೂ ಅಧಿಕಾರಿಗಳ ಮೇಲೆ ಹರಿಹಾಯ್ದ ಲಿಂಗಮೂರ್ತಿ, ಈ ಸಭೆಗೆ ನಾನು ಆಹ್ವಾನಿತ ಅಲ್ಲ ಎನ್ನುವುದು ಗೊತ್ತಿದೆ. ಆದರೆ, ಕಾರ್ಯನಿರ್ವಾಹಕ ಅಧಕಾರಿ ಕರೆದ ಕಾರಣಕ್ಕೆ ಬಂದಿದ್ದೇನೆ. ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ನನ್ನನ್ನು ಆಹ್ವಾನಿಸಿ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ ನಿಗದಿಯಾಗಿದ್ದ ಕ್ರೀಡಾಂಗಣದ ಮಳಿಗೆಗಳ ಉದ್ಘಾಟನೆಗೂ ನನಗೆ ಆಹ್ವಾನ ನೀಡಿಲ್ಲ. ಕಾರಣ ಕೇಳಿದ ನಂತರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಇದಕ್ಕೆ ಕಾರಣ ಕೊಡಬೇಕು ಎಂದು ಆಗ್ರಹಿಸುತ್ತಲೇ ಸಿಟ್ಟಿನಿಂದ ಲಿಂಗಮೂರ್ತಿ ಸಭೆಯಿಂದ ನಿರ್ಗಮಿಸಿದರು.
ಗೂಳಿಹಟ್ಟಿ ಶೇಖರ್ ಮಾತನಾಡಿ, ಶಿಷ್ಟಾಚಾರ ಪಾಲಿಸುವಲ್ಲಿ ತಪ್ಪಾದ ಕಾರಣ ಮಳಿಗೆಗಳ ಉದ್ಘಾಟನೆ ರದ್ದುಗೊಳಿಸಲಾಗಿದೆ. ಆದರೆ, ತಾಪಂ ಸಭೆಗೆ ಆಹ್ವಾನಿತರಲ್ಲದಿದ್ದರೂ ಆಗಮಿಸಿ ದೌರ್ಜನ್ಯ ನಡೆಸಿರುವುದು ಸರಿಯಲ್ಲ. ಈ ಘಟನೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಇಒ ವಿಶ್ವನಾಥ್, ತಹಸೀಲ್ದಾರ್ ಮಲ್ಲಿಕಾರ್ಜುನ್ ಇದ್ದರು.
ನಾನು 4 ತಿಂಗಳ ಗರ್ಭಿಣಿ.. ಪ್ಲೀಸ್ ನೀವೆಲ್ಲ ನನಗೊಂದು ಸಹಾಯ ಮಾಡಿ… ಮಗಳ ಸಾವಿನ ನೋವಲ್ಲೂ ಅಮೃತಾ ಮನವಿ
ಸೋಲದೇವನಹಳ್ಳಿ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ಕೊಟ್ಟದ್ದೇ ಮಾಲೀಕನ ಪತ್ನಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ