ಕೆ.ಆರ್.ಪುರ/ಬೆಂಗಳೂರು: ಯುವತಿಯಿಂದ ಬಂದ ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಉಪ ತಹಸೀಲ್ದಾರ್ವೊಬ್ಬರು ‘ಹನಿಟ್ರ್ಯಾಪ್’ಗೆ ಸಿಕ್ಕಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಕೆಯ ಆಹ್ವಾನದ ಮೇರೆಗೆ ಹೋಟೆಲ್ಗೆ ಹೋದ ಉಪ ತಹಸೀಲ್ದಾರ್ಗೆ ಮತ್ತು ಬರುವ ಔಷಧ ಕೊಟ್ಟು ಅಶ್ಲೀಲ ವಿಡಿಯೋ ಮಾಡಿಕೊಂಡು ಚಿತ್ರಹಿಂಸೆ ಕೊಡುತ್ತಿದ್ದ ಕೆ.ಆರ್. ಪುರ ಪೊಲೀಸರು ಬಂಧಿಸಿದ್ದಾರೆ.
ಕೋಡಿಗೆಹಳ್ಳಿಯ ನಿವಾಸಿ ಗಣಪತಿ ನಾಯಕ್, ಕಿಶನ್ ಮತ್ತು ಕೇಶವ್ ಬಂಧಿತರು. ಗದಗ ಮೂಲದ ಜ್ಯೋತಿ ವಿಶ್ವನಾಥ್ ತೋಪಗಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೊಸಕೋಟೆ ನಿವಾಸಿ ಕೋಲಾರ ಜಿಲ್ಲೆಯ ಉಪ ತಹಸೀಲ್ದಾರ್ ಗೌತಮ್ (40) ಹನಿಟ್ರ್ಯಾಪ್ಗೆ ಒಳಗಾದವರು. 2021ರ ಜುಲೈನಲ್ಲಿ ಉಪ ತಹಸೀಲ್ದಾರ್ ಕಂಟನಲ್ಲೂರು ಕ್ರಾಸ್ ಬಳಿಯ ಹೋಟೆಲ್ಗೆ ಊಟ ಮಾಡಲು ಬಂದಿದ್ದ ಸಂದರ್ಭದಲ್ಲಿ ಆರೋಪಿತೆ ಜ್ಯೋತಿ ವಿಶ್ವನಾಥ್ ತೋಪಗಿ ತನ್ನನ್ನು ಪರಿಚಯಿಸಿಕೊಂಡಿದ್ದಳು. ಗೌತಮ್ ಮೊಬೈಲ್ ನಂಬರ್ ಪಡೆದು, ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ಮೊಬೈಲ್ ವಾಟ್ಸ್ಆಪ್, ಮೆಸೆಂಜರ್ಗೆ ನಿರಂತರವಾಗಿ ಸಂದೇಶ ಕಳುಹಿಸಿ ತನ್ನತ್ತ ಆಕರ್ಷಿತರಾಗುವಂತೆ ಮಾಡಿದ್ದಳು. ಜ್ಯೋತಿಯ ಮೋಹಕ ಮಾತಿಗೆ ಮರುಳಾದ ಉಪ ತಹಸೀಲ್ದಾರ್ ಗೌತಮ್, ಆಕೆಯ ಸೂಚನೆಯಂತೆ ಒಂದೆರಡು ಬಾರಿ ಹೋಟೆಲ್ನಲ್ಲಿ ಭೇಟಿಯಾಗಿ ಜತೆಗೆ ಊಟ ಮಾಡಿದ್ದರು. ಇದಾದ ಮೇಲೆ ಶುರುವಾಯ್ತು ಆಕೆಯ ಅಸಲಿ ಮುಖ.
ಕೆಲ ಸಮಯದ ಬಳಿಕ ಭಟ್ಟರಹಳ್ಳಿಯ ಹೋಟೆಲ್ವೊಂದಕ್ಕೆ ಗೌತಮ್ ಅವರನ್ನು ಕರೆಸಿಕೊಂಡ ಜ್ಯೋತಿ, ಅದೇ ಬಿಲ್ಡಿಂಗ್ನ ಮೇಲ್ಭಾಗದ ರೂಂಗೆ ಕರೆದುಕೊಂಡು ಹೋಗಿ ಮತ್ತು ಬರುವ ಜ್ಯೂಸ್ ಕೊಟ್ಟಿದ್ದಳು. ಗೌತಮ್ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ಕಳೆದುಕೊಂಡಿದ್ದು, ಅವರ ಬಟ್ಟೆಬಿಚ್ಚಿ ಅವರೊಂದಿಗೆ ಅಶ್ಲೀಲವಾಗಿ ಕಳೆದಿರುವ ಖಾಸಗಿ ಫೋಟೊವನ್ನು ಜ್ಯೋತಿ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡು ಹೋಟೆಲ್ನಿಂದ ತೆರಳಿದ್ದಳು. ಕೆಲ ಹೊತ್ತಿನ ಬಳಿಕ ಗೌತಮ್ಗೆ ಎಚ್ಚರವಾದಾಗ ಅರೆನಗ್ನಾವಸ್ಥೆಯಲ್ಲಿದ್ದರು.
25 ಲಕ್ಷ ರೂ.ಗೆ ಬೇಡಿಕೆ: ಕಳೆದ ಫೆ.24ರಂದು ಕೋಲಾರದ ಎ.ಸಿ. ಕಚೇರಿಗೆ ಬಂದು ಗೌತಮ್ ಅವರನ್ನು ಭೇಟಿಯಾದ ಆರೋಪಿಗಳಾದ ಗಣಪತಿ ನಾಯಕ್, ರಮೇಶ್ಗೌಡ, ಸಂತೋಷ್ ತಮ್ಮನ್ನು ವಕೀಲರು ಎಂದು ಪರಿಚಯಿಸಿಕೊಂಡಿದ್ದರು. ನಂತರ ಜ್ಯೋತಿ ಸೆರೆಹಿಡಿದಿದ್ದ ಅಶ್ಲೀಲ ವಿಡಿಯೋ ತೋರಿಸಿ, ನಾವು ಹೇಳಿದ ಸ್ಥಳಕ್ಕೆ ಬಂದರೆ ಸಂಪೂರ್ಣ ವಿಡಿಯೋ ತೋರಿಸುವುದಾಗಿ ಹೇಳಿದ್ದರು. ಫೆ.25ರಂದು ಗೌತಮ್ ಅವರನ್ನು ಕೋಡಿಗೆಹಳ್ಳಿಯ ಹೋಟೆಲ್ವೊಂದಕ್ಕೆ ಕರೆಸಿಕೊಂಡು ವಿಡಿಯೋ ತೋರಿಸಿ 25 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಹಣ ಕೊಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದರು. ಆರೋಪಿಗಳ ಬೆದರಿಕೆಗೆ ಗೌತಮ್ ಜಗ್ಗದಿದ್ದಾಗ, ಮಾ.10ರಂದು ಮತ್ತೆ ಆರೋಪಿ ಗಣಪತಿ ನಾಯಕ್ ತಾವಿದ್ದಲ್ಲಿಗೆ ಗೌತಮ್ ಅವರನ್ನು ಕರೆಸಿಕೊಂಡು ಮಾ.17ರೊಳಗೆ 10 ಲಕ್ಷ ರೂ. ಕೊಡುವಂತೆ ಬೆದರಿಸಿದ್ದರು. ಇದರಿಂದ ನೊಂದ ಗೌತಮ್ ಈ ಬಗ್ಗೆ ಕೆ.ಆರ್.ಪುರ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳು ಸಿಕ್ಕಿ ಬಿದ್ದಿದ್ದೇ ರೊಚಕ: ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೌತಮ್ ಮೂಲಕ ಆರೋಪಿಗಳಿಗೆ ಕರೆ ಮಾಡಿಸಿ, ಹಣ ಕೊಡುವುದಾಗಿ ಯಲಹಂಕದ ಕೊಡಿಗೇಹಳ್ಳಿ ಬಳಿ ಬರುವಂತೆ ಕರೆಸಿಕೊಂಡಿದ್ದರು. ಆರೋಪಿಗಳು ಕಾರಿನಲ್ಲಿ ಬರುತ್ತಿದ್ದಂತೆ ಸಿವಿಲ್ ಧಿರಿಸಿನಲ್ಲಿದ್ದ ಪೊಲೀಸರು ಕಾರು ಸುತ್ತುವರಿದು ಬಂಧಿಸಲು ಮುಂದಾದಾಗ ಆರೋಪಿಗಳು ಪರಾರಿಯಾಗಿದ್ದರು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ವಕೀಲರೊಬ್ಬರು ಗೌತಮ್ಗೆ ಕರೆ ಮಾಡಿ ‘ಹಣ ಕೊಡಲು ಹೇಳಿದರೆ ರೌಡಿಗಳನ್ನು ಕರೆಸುತ್ತೀಯಾ?’ ಎಂದು ಬೆದರಿಸಿದ್ದರು. ಈ ವಿಚಾರವನ್ನು ಗೌತಮ್ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಆ ಜನಪ್ರಿಯ ವಕೀಲರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ, ಆರೋಪಿಗಳು ತಮ್ಮ ಕಚೇರಿಯಲ್ಲೇ ಬಚ್ಚಿಟ್ಟುಕೊಂಡಿರುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಆ ವಕೀಲರ ಕಚೇರಿಗೆ ತೆರಳಿದ ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜನಪ್ರಿಯ ವಕೀಲರ ಸಹಚರರು: ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ವಕೀಲರೊಬ್ಬರ ಸಹಚರರು ಎಂಬುದು ಗೊತ್ತಾಗಿದೆ. ದೂರುದಾರರು ಬ್ಲ್ಯಾಕ್ಮೇಲ್ನಿಂದ ಆತಂಕಗೊಂಡು ಆರೋಪಿಗಳಿಗೆ ಈ ಹಿಂದೆ 5 ಲಕ್ಷ ರೂ. ನೀಡಿದ್ದರು ಎನ್ನಲಾಗಿದೆ. ಹನಿಟ್ರ್ಯಾಪ್ ಕೇಸ್ನಲ್ಲಿ ಆ ಜನಪ್ರಿಯ ವಕೀಲರ ಪಾತ್ರವೇನು? ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಆರೋಪಿಗಳನ್ನು 10 ದಿನ ವಶಕ್ಕೆ ಪಡೆದಿರುವ ಪೊಲೀಸರು ಇದೇ ಮಾದರಿಯಲ್ಲಿ ಈ ಹಿಂದೆ ಎಷ್ಟು ಜನರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಎಚ್ಡಿಕೆ ಬೆಂಗಾವಲು ವಾಹನ ಅಪಘಾತ: ಪಾವಗಡ ಬಸ್ ದುರಂತದಲ್ಲಿ ಗಾಯಗೊಂಡವರ ಭೇಟಿ ವೇಳೆ ಮತ್ತೊಂದು ಅವಘಡ
ತುಮಕೂರಿನ ಲಾಡ್ಜ್ನಲ್ಲಿ ಹೆಂಡ್ತಿ ಕಾಲನ್ನೇ ಕತ್ತರಿಸಿದ ಗಂಡ: ನೋವಲ್ಲೂ ಆಕೆ ಬಾಯ್ಬಿಟ್ಟ ರಹಸ್ಯ ಇಲ್ಲಿದೆ