ಉಡುಪಿ: ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಎಂಜಿಎಂ ಕಾಲೇಜಿಗೂ ವ್ಯಾಪಿಸಿದೆ. ಪ್ರಾಂಶುಪಾಲರ ಆದೇಶ ಉಲ್ಲಂಘಿಸಿ ಮಂಗಳವಾರ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಇದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೇಸರಿ ಶಾಲು, ಪೇಟ ಧರಿಸಿ ಕ್ಯಾಂಪಸ್ನಲ್ಲಿ ಹಾಜರಾಗಿದ್ದ ಸ್ಥಳದಲ್ಲಿ ಉದ್ವಿಗನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಕಾಲೇಜಿಗೆ ಆಡಳಿತ ಮಂಡಳಿ ಅನಿರ್ದಿಷ್ಟಾವಧಿ ರಜೆ ಘೋಷಣೆ ಮಾಡಿತು.
ಪ್ರಾಧ್ಯಾಪಕರು ಹಾಗೂ ಉಪನ್ಯಾಸಕಿಯರು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರೂ ಎರಡೂ ಕಡೆಯವರು ತಮ್ಮ ಪಟ್ಟು ಸಡಿಲಿಸದ ಕಾರಣ ಕ್ಯಾಂಪಸ್ನಿಂದ ವಿದ್ಯಾರ್ಥಿಗಳನ್ನು ಹೊರ ಹಾಕಲಾಯಿತು. ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಬಂದ ಪೊಲೀಸರು ಬಂದೋಬಸ್ತ್ ಕೈಗೊಂಡರು.
ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕಾಲೇಜಿನಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಲಾಗಿದೆ. ಕಾಲೇಜು ಆಡಳಿತ ಮಂಡಳಿಯ ತೀರ್ಮಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು. ಕಾಲೇಜಿನಲ್ಲಿ ಉತ್ತಮ ವಾತಾವರಣ ಇದೆ, ಸಮಸ್ಯೆಯಿಲ್ಲ. ಆದರೆ ಹೊರಗಿನ ವಿಚಾರಗಳಿಂದ ಪ್ರಭಾವಿತರಾಗಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪದವಿ ಮತ್ತು ಪಿಯು ತರಗತಿಗೆ ರಜೆ ನೀಡಲಾಗಿದೆ. ಕೋರ್ಟ್ ಆದೇಶದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ.ದೇವಿದಾಸ ನಾಯ್ಕ ತಿಳಿಸಿದ್ದಾರೆ.
‘ಜೈ ಶ್ರೀರಾಮ್’ ಘೋಷಣೆ ವೇಳೆ ‘ಅಲ್ಲಾವು ಅಕ್ಬರ್’ ಎಂದು ಕೂಗಿದ ವಿದ್ಯಾರ್ಥಿನಿ!
ಭುಗಿಲೆದ್ದ ಹಿಜಾಬ್ ವಿವಾದ: ಬನಹಟ್ಟಿಯಲ್ಲಿ ಕಲ್ಲು ತೂರಾಟ, ಕಾಲೇಜಿಗೆ ರಜೆ ಘೋಷಣೆ, ಪೊಲೀಸರಿಂದ ಲಾಠಿ ಚಾರ್ಜ್