ಕಡೂರು: ಸಂಕ್ರಾಂತಿ ಬಳಿಕ ಮಾಜಿ ಶಾಸಕ ವೈಎಸ್ವಿ ದತ್ತ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಕುರಿತು ಸಂಸದ ಪ್ರಜ್ವಲ್ ರೇವಣ್ಣ ಕೊಟ್ಟ ಸ್ಪಷ್ಟನೆ ಇಲ್ಲಿದೆ.
ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಮಂಗಳವಾರ ಅರೇಕಲ್ಲಮ್ಮ ದೇವಿಯ ಬಾನಸೇವೆ ಅಂಗವಾಗಿ ವೈಎಸ್ವಿ ದತ್ತ ಅವರ ನಿವಾಸಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್, ಜಾತ್ಯತಿತ ನಿಲುವಿನ ಕಟ್ಟಾಳು ದತ್ತ. ಅವರು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಆರು ತಿಂಗಳಿಂದ ಕಾಂಗ್ರೆಸ್ನವರೇ ಸೃಷ್ಟಿ ಮಾಡಿರುವ ದತ್ತ ಕಾಂಗ್ರೆಸ್ ಸೇರ್ಪಡೆ ಕುರಿತಾದ ರೆಕ್ಕೆಪುಕ್ಕವಿಲ್ಲದ ಮಾಹಿತಿ ಹರಿದಾಡುತ್ತಿದೆ. ಇದಕ್ಕೆ ತೆರೆ ಎಳೆಯಬೇಕಾಗಿದೆ. ಜೆಡಿಎಸ್ ಕಾರ್ಯಕರ್ತರು ಇಂಥ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ಕ್ರಿಯಾಶೀಲರಾಗಬೇಕಿದೆ. ದತ್ತಣ್ಣ ಜೆಡಿಎಸ್ನಲ್ಲಿ ಭದ್ರವಾಗಿ ನೆಲೆಯೂರಿದ್ದು ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು ಎಂದರು.
ಮುಂಬರುವ ಜಿಪಂ, ತಾಪಂ ಚುನಾವಣೆಗಳು ದತ್ತಣ್ಣ ನೇತೃತ್ವದಲ್ಲಿ ನಡೆಯಲಿವೆ. ದೇವೇಗೌಡರ ಆಸೆ ದತ್ತ ಅವರನ್ನು ಮಂತ್ರಿ ಸ್ಥಾನದಲ್ಲಿ ನೋಡಬೇಕು ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದತ್ತಗೆ ಎಚ್.ಡಿ.ರೇವಣ್ಣ ಹಾಗೂ ನಾನು ಎಲ್ಲ ರೀತಿಯ ಸಹಕಾರ ನೀಡುವ ಮೂಲಕ ಅವರನ್ನು ಶಾಸಕರನ್ನಾಗಿ ಮಾಡುತ್ತೇವೆ ಎಂದು ತಿಳಿಸಿದರು.
ದತ್ತ ಶಾಸಕರಾಗಿದ್ದ ಅವಧಿಯಲ್ಲಿ ಹಾಗೂ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಅವರು ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದರು. ದೇವೇಗೌಡರು ಹಾಗೂ ದತ್ತ ಅವರ ನಡುವಿನ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಶಿವಮೊಗ್ಗ, ಭದ್ರಾವತಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಉಸ್ತುವಾರಿಯನ್ನು ದತ್ತ ಅವರಿಗೆ ಪಕ್ಷದ ವರಿಷ್ಠರು ವಹಿಸಿದ್ದಾರೆ ಎಂದು ಪ್ರಜ್ವಲ್ ಹೇಳಿದರು.
ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ಗಿಂತ ಜೆಡಿಎಸ್ ಭದ್ರವಾಗಿದೆ. ಕ್ಷೇತ್ರದಲ್ಲಿ ಸಾಮಾನ್ಯ ಜನರಿಗೆ ಸ್ಪಂದಿಸುವ ಮುಖಂಡನ ಅವಶ್ಯಕತೆ ಇದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ನಾನು ಬಾಲ್ಯದಲ್ಲಿ ದೇಶದ ಪ್ರಧಾನ ಮಂತ್ರಿಯ ಮನೆಯಲ್ಲಿ ಬೆಳೆದಿದ್ದೆ. ಈಗ ಆ ಹುದ್ದೆಯಲ್ಲಿ ನನ್ನ ಕುಟುಂಬದವರಿಲ್ಲ. ಇರುವುದು ಜನರ ಪ್ರೀತಿ ಮಾತ್ರ. ಪ್ರೀತಿಯಿಂದ ಜನರ ಮನಸ್ಸನ್ನು ಗೆಲ್ಲಬೇಕಿದೆ ಎಂದು ಪ್ರತಿಪಾದಿಸಿದರು.
ಮಾಜಿ ಶಾಸಕ ವೈಎಸ್ವಿ ದತ್ತ, ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಎಪಿಎಂಸಿ ನಿರ್ದೇಶಕ ಬಿದರೆ ಜಗದೀಶ್, ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದಶಿರ್ ಸಿ.ಎಚ್.ಪ್ರೇಮ್ಕುಮಾರ್, ಮುಖಂಡರಾದ ಪಂಚನಹಳ್ಳಿ ಪಾಪಣ್ಣ, ಮಚ್ಚೇರಿ ಮಹೇಶ್, ಸಾಣೇಹಳ್ಳಿ ನಿಂಗಪ್ಪ, ಮುಬಾರಕ್, ಮೋಹನ್ ಇತರರಿದ್ದರು.
ಸೇತುವೆ ಮೇಲಿಂದ ಪ್ರಪಾತಕ್ಕೆ ಕಾರು ಪಲ್ಟಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ದಾರುಣ ಸಾವು
ಗ್ರಾಪಂ ಕಚೇರಿಯಲ್ಲೇ ಪ್ರೇಮಿಗಳ ಮದುವೆ, ಪೌರೋಹಿತ್ಯ ವಹಿಸಿದ ಪಿಡಿಒ! ನಂಜನಗೂಡಲ್ಲಿ ನವಜೋಡಿ ಪ್ರಕರಣ ಸುಖಾಂತ್ಯ