ಆಲ್ದೂರು: ಪಟ್ಟಣದಲ್ಲಿ ಪಟಾಕಿ ಮಾರಾಟ ಅಂಗಡಿಗಳನ್ನು ತೆರೆಯಲು ಬುಧವಾರ ಅಧಿಕಾರಿಗಳು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದ ಆದೇಶದ ಮೇರೆಗೆ ಸ್ಥಳ ಪರಿಶೀಲಿಸಿ ಗುರುತಿಸಲಾಯಿತು.
ಪಟ್ಟಣದ ಬೀರಂಜಿ ಹಳ್ಳದ ಬಳಿ ಹಾಗೂ ಮೂಡಿಗೆರೆ ರಸ್ತೆಯ ಗದ್ದೆ ಬದಿ ಸ್ಥಳ ಪರಿಶೀಲಿಸಿದರು. ಬೀರಂಜಿ ಹಳ್ಳದ ಬಳಿ ಗದ್ದೆ ಬಯಲಿನಲ್ಲಿ ನಾಲ್ಕು ಪಟಾಕಿ ಅಂಗಡಿಗಳನ್ನು ಹಾಕಲು ಅನುಮತಿ ನೀಡಿದರು.
ಬೆಂಗಳೂರಿನ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಇಂಥ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪಟಾಕಿ ಮಾರಾಟದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.
ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ಡಾ. ಸುಮಂತ್, ಕಂದಾಯ ಅಧಿಕಾರಿ ವೆಂಕಟೇಶ್, ಆಲ್ದೂರು ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್ಐ ಕೀರ್ತಿಕುಮಾರ್, ಪಿಡಿಒ ಶಂಶುನ್ ನಹರ್, ಕಾರ್ಯದರ್ಶಿ ಉಷಾ ಇದ್ದರು.