ಹನೂರು : ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೆಯ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ದೇಗುಲದ ಮುಂಭಾಗ ಅಗ್ನಿಕುಂಡವನ್ನು ಸ್ಥಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಾತ್ರಾ ಮಹೋತ್ಸವದ ಕೊನೇ ದಿನ ಅಗ್ನಿಕುಂಡ ದರ್ಶನ ಕಾರ್ಯಕ್ರಮವಿದ್ದು, ಸಾವಿರಾರು ಭಕ್ತರು ಭಾಗಿಯಾಗುತ್ತಾರೆ. ಹೀಗಾಗಿ ಅಗ್ನಿಕುಂಡವನ್ನು ಸ್ಥಾಪಿಸುವುದು ಪ್ರತೀತಿ. ಈ ಹಿನ್ನೆಲೆಯಲ್ಲಿ ದೇಗುಲದಲ್ಲಿ ಬೆಳಗಿನ ಜಾವ 4.30ರಲ್ಲಿ ಪನ್ನೀರು, ಎಳನೀರು, ಕುಂಕುಮ, ಜೇನುತುಪ್ಪ, ಹಾಲು, ಮೊಸರು, ಅರಿಶಿಣ, ಕುಂಕುಮ ಹಾಗೂ ಗಂಧದ ಅಭಿಷೇಕವನ್ನು ನೆರವೇರಿಸಲಾಯಿತು.
ರಾತ್ರಿ 8ರ ವೇಳೆಯಲ್ಲಿ ದೇಗುಲದ ಗರ್ಭಗುಡಿಯಲ್ಲಿ ಅರ್ಚಕರು ಭಕ್ತರ ಸಮ್ಮುಖದಲ್ಲಿ ಅಗ್ನಿಕುಂಡಕ್ಕೆ ಬೆಂಕಿಯನ್ನು ಸ್ಪರ್ಶಿಸಿ ವಿಶೇಷ ಪೂಜೆ ನೆರವೆರಿಸಿದರು. ಬಳಿಕ ಪ್ರಧಾನ ಅರ್ಚಕ ರಾಜೋಜಿರಾವ್ ಸಿಂಧೆ ಅವರು ಮಂಗಳ ವಾದ್ಯದೊಂದಿಗೆ ಆಗಮಿಸಿ ದೇಗುಲದ ಮುಂಭಾಗದಲ್ಲಿ ಸ್ಥಾಪಿಸಲಾಗಿದ್ದ ಮೂರು ಕವಡಿನ ಕಂಬಕ್ಕೆ ಅಗ್ನಿಕುಂಡವನ್ನು ಇರಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಭಕ್ತರು ಜಯಘೋಷಗಳನ್ನು ಮೊಳಗಿಸಿದರಲ್ಲದೇ ಯುವಕರು ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.