ಬೆಂಗಳೂರು: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಪೌರ ಕಾರ್ಮಿಕನನ್ನು ಚಾಕುವಿನಿಂದ ಇರಿದು ಸ್ನೇಹಿತನೇ ಕೊಲೆ ಮಾಡಿದ್ದಾನೆ.
ನಾಯಂಡಹಳ್ಳಿ ನಿವಾಸಿ ಭರತ್ (22) ಕೊಲೆಯಾದ ದುರ್ದೈವಿ. ಈ ಸಂಬಂಧ ಮೃತನ ಸ್ನೇಹಿತ ಪ್ರಭುನನ್ನು ಪೊಲೀಸರು ಬಂಧಿಸಿದ್ದಾರೆ. ಮನೆ ಸಮೀಪ ಭಾನುವಾರ ರಾತ್ರಿ ಇಬ್ಬರು ಮದ್ಯ ಸೇವಿಸುವಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿಯಲ್ಲಿ ಸ್ವಚ್ಛತಾ ಕೆಲಸಗಾರನಾಗಿ ಭರತ್ ಮತ್ತು ಪ್ರಭು ಆಟೋ ಚಾಲಕನಾಗಿದ್ದ. ಒಂದೇ ಪ್ರದೇಶದಲ್ಲಿ ಇಬ್ಬರು ನೆಲೆಸಿದ್ದರು. ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ರಾತ್ರಿ ಮದ್ಯ ಸೇವಿಸುತ್ತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಜಗಳವಾಗಿದೆ.
ಈ ಹಂತದಲ್ಲಿ ಕೆರಳಿದ ಪ್ರಭು, ಚಾಕುವಿನಿಂದ ಐದಾರು ಬಾರಿ ಭರತ್ಗೆ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.