ಹೊಸನಗರ: ಮೂರು ವರ್ಷಗಳ ಹಿಂದೆ ಮನಸ್ತಾಪಗೊಂಡು ದೂರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ತಂದೆ-ತಾಯಿಯನ್ನು ಮಗನೇ ಒಂದು ಮಾಡಿದ್ದಾನೆ. ಲೋಕ ಅದಾಲತ್ನಲ್ಲಿ ಈ ಅಪೂರ್ವ ಕ್ಷಣಕ್ಕೆ ನ್ಯಾಯಾಧೀಶರು ಸಾಕ್ಷಿಯಾದರು.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕಡೆಗದ್ದೆಯ ಗಣೇಶಮೂರ್ತಿ ಮತ್ತು ಪೂರ್ಣಿಮಾ 17 ವರ್ಷಗಳ ಹಿಂದೆ ಮದುವೆಯಾಗಿ 14 ವರ್ಷ ಸುಖ ಸಂಸಾರ ನಡೆಸಿದ್ದರು. ದಂಪತಿಗೆ ಒಬ್ಬ ಮಗನೂ ಇದ್ದಾನೆ. ಮೂರು ವರ್ಷದ ಹಿಂದೆ ಪೂರ್ಣಿಮಾ ಶಿವಮೊಗ್ಗದ ತನ್ನ ತವರು ಮನೆಗೆ ಹೋದ ಸಂದರ್ಭದಲ್ಲಿ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ನಂತರ ಇದೇ ಬಿರುಕು ದೊಡ್ಡದಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕೋರ್ಟ್ ಮೆಟ್ಟಲೇರಿದ್ದರು.
ಗಣೇಶಮೂರ್ತಿ-ಪೂರ್ಣಿಮಾರ ಮಗ ಸುಹಾಸ್ ಕಶ್ಯಪ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇಷ್ಟು ದಿನ ತಂದೆಯ ಜತೆಗಿದ್ದ. ಆದರೆ ತಾಯಿ ಇದ್ದರೂ ಅನಾಥವಾಗಿದ್ದೇನೆ ಎಂದು ವಕೀಲ ವಾಲೆಮನೆ ಶಿವಕುಮಾರ್ ಬಳಿ ನೋವು ತೋಡಿಕೊಂಡಿದ್ದ. ಈ ಬಗ್ಗೆ ತಂದೆ-ತಾಯಿಯೊಂದಿಗೆ ಮಾತನಾಡಿದ ವಕೀಲರು ಒಂದುಮಾಡುವ ಪ್ರಯತ್ನಕ್ಕೆ ಕೈಹಾಕಿದ್ದರು. ಅದರಂತೆ ಹೊಸನಗರ ಪಟ್ಟಣದ ಕೋರ್ಟ್ನಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ತಂದೆ-ತಾಯಿ ಇಬ್ಬರನ್ನೂ ವಕೀಲರು ಕರೆಸಿದ್ದರು. ಮಗನ ಮನವಿಗೆ ಕರಗಿದ ದಂಪತಿ ಇಬ್ಬರೂ ಮನಸ್ಸು ಬದಲಾಯಿಸಿಕೊಂಡು ಮತ್ತೆ ಒಂದಾಗಲು ನಿರ್ಧರಿಸಿದರು.
ಹೊಸನಗರ ಪಟ್ಟಣದ ಜೆಎಂಎಫ್ಸಿ ಹಿರಿಯ ನ್ಯಾಯಾಧೀಶೆ ಪುಷ್ಪಲತಾ ಮತ್ತು ಪ್ರಧಾನ ವ್ಯವಹಾರ ನ್ಯಾಯಾಧೀಶ ರವಿಕುಮಾರ್ ಸಮ್ಮುಖದಲ್ಲಿ ಗುರುಮೂರ್ತಿ ಮತ್ತು ಪೂರ್ಣಿಮಾ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಮತ್ತೆ ಒಂದಾಗಿದ್ದಾರೆ.
ನಾವು ಮೂರು ವರ್ಷಗಳಿಂದ ಒಂದು ಸಣ್ಣ ಮನಸ್ತಾಪದಿಂದ ದೂರ ಉಳಿಯುವಂತಾಗಿತ್ತು. ಆದರೆ ಮಗ ಸುಹಾಸ್ ಕಶ್ಯಪ್ ಇಬ್ಬರ ಬಳಿಯೂ ಮಾತನಾಡಿ ಒಂದುಗೂಡಿಸುವ ಪ್ರಯತ್ನ ಮಾಡಿದ್ದಾನೆ. ಈಗ ಸಂತಸದಿಂದ ಒಂದಾಗುತ್ತಿದ್ದೇವೆ ಎಂದು ಗುರುಮೂರ್ತಿ ದಂಪತಿ ಹೇಳಿದ್ದಾರೆ.
ಸಾವಲ್ಲೂ ಸಾರ್ಥಕತೆ ಮೆರೆದ ಭರತ್ಗೌಡ: ಮಗನ ಕಳೆದುಕೊಂಡ ನೋವಲ್ಲೂ 7 ಜನ್ರ ಪ್ರಾಣ ಉಳಿಸಿದ ಪಾಲಕರು
ಕಲಬುರಗಿಯಲ್ಲಿ ಘೋರ ದುರಂತ: ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಪಿಯು ವಿದ್ಯಾರ್ಥಿನಿ ಸಾವು