ಮೂಡಿಗೆರೆ: 9ನೇ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿದ್ದ ಬಾಲಕಿ ಇದೀಗ ಗಂಡ-ಮಕ್ಕಳೊಂದಿಗೆ ತಾಯಿ ಎದುರು ಪ್ರತ್ಯಕ್ಷ್ಯವಾದ ಮನಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ. ತಾಯಿಯನ್ನ ಭೇಟಿಯಾಗುತ್ತಿದ್ದಂತೆ ಅಮ್ಮ-ಮಗಳು ತಬ್ಬಾಡುತ್ತಾ ಕಣ್ಣೀರಿಟ್ಟ ದೃಶ್ಯ ವೈರಲ್ ಆಗಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದ ಪೂರ್ಣೇಶ್ ಎಂಬುವವರ ಕಾಫಿ ಎಸ್ಟೇಟಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಕೂಲಿಲೈನ್ನಲ್ಲಿ ವಾಸವಾಗಿದ್ದ ತಮಿಳುನಾಡು ಮೂಲದ ಚೈತ್ರಾ ಮತ್ತು ಕಾಳಿಮುತ್ತು ದಂಪತಿಯ 5ನೇ ಪುತ್ರಿ ಅಂಜಲಿ 1999ರಲ್ಲಿ ನಾಪತ್ತೆಯಾಗಿದ್ದಳು. ಆಗ ಈಕೆಯ ವಯಸ್ಸು 9 ವರ್ಷ. ಮುದ್ರೆಮನೆ ಪರಿಸರದಲ್ಲಿ ಟಿಂಬರ್ ಕೆಲಸದ ಆನೆ ಮಾವುತನ ಪರಿಚಯವಾಗಿ ಆತನೊಂದಿಗೆ ಕೇರಳದ ಕ್ಯಾಲಿಕಟ್ಗೆ ಹೋಗಿಬಿಟ್ಟಿದ್ದಳು. ಈ ವಿಷಯ ಪಾಲಕರಿಗೂ ಗೊತ್ತಿರಲಿಲ್ಲ. ಮಗಳಿಗಾಗಿ ಪಾಲಕರು ಹುಡುಕಾಟ ನಡೆಸಿದರೂ ಆಕೆಯ ಸುಳಿವು ಸಿಕ್ಕಿರಲಿಲ್ಲ. ಅತ್ತ ಬಾಲಕಿಯನ್ನು ಕೇರಳಕ್ಕೆ ಕರೆದುಕೊಂಡು ಹೋದಾತ, ಅಂಜಲಿ ಹೆಸರನ್ನು ಬದಲಾಯಿಸಿ ಮಂಜು ಎಂದು ನಾಮಕರಣ ಮಾಡಿದ್ದ. ಬಾಲಕಿಯನ್ನು 5 ವರ್ಷ ಮನೆಯಲ್ಲೇ ಇರಿಸಿಕೊಂಡಿದ್ದ ಆತ, ಬಳಿಕ ಕ್ಯಾಲಿಕಟ್ನ ಮುಕ್ಕಂ ಎಂಬಲ್ಲಿಯ ನೆಲ್ಮಣಿ ಶಾಜಿ ಎಂಬಾತನೊಂದಿಗೆ ಮದುವೆ ಮಾಡಿದ್ದ. ದಂಪತಿಗೆ ಒಂದು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
23 ವರ್ಷದ ಬಳಿಕ ತಂದೆ-ತಾಯಿಯನ್ನು ನೋಡಬೇಕು ಹಾತೊರೆದ ಅಂಜಲಿ(ಮಂಜು), ಗಂಡನ ಬಳಿ ಹೇಳಿಕೊಂಡಿದ್ದಳು. ಪತ್ನಿಯ ಆಸೆ ಈಡೇರಿಸಲು ಮುಂದಾದ ನೆಲ್ಮಣಿ ಶಾಜಿ, ಮಂಗಳೂರಿನಲ್ಲಿದ್ದ ತನ್ನ ಸ್ನೇಹಿತ ಮುಸ್ತಾ ಎಂಬುವವರನ್ನು ಸಂಪರ್ಕಿಸಿ ಮೂಡಿಗೆರೆ ತಾಲೂಕಿನ ಮುದ್ರೆಮನೆ ಎಸ್ಟೇಟಿನ ವಿಳಾಸ ಕೇಳಿದ್ದರು. ಮುಸ್ತಾ ಅವರು ಮೂಡಿಗೆರೆ ಸಮಾಜಸೇವಕ ಫಿಶ್ ಮೋಣು ಅವರನ್ನು ಸಂಪರ್ಕಿಸಿ ವಿಳಾಸ ಪತ್ತೆಹಚ್ಚಿದ್ದರು.
ಜ.3ರಂದು ಅಂಜಲಿ ಮತ್ತು ನೆಲ್ಮಣಿ ಶಾಜಿ ದಂಪತಿ ಕ್ಯಾಲಿಕಟ್ನಿಂದ ಹೊರಟು ಇಂದು(ಜ.4) ಬೆಳಗ್ಗೆ ಮೂಡಿಗೆರೆ ಫಿಶ್ಮೋಣು ಅವರನ್ನು ಭೇಟಿಯಾಗಿದರು. ಮುದ್ರೆಮನೆ ಎಸ್ಟೇಟ್ಗೆ ಸಂಪರ್ಕಿಸಿದಾಗ ಅಂಜಲಿ ಪಾಲಕರು ಅಲ್ಲಿರಲಿಲ್ಲ. ಬಳಿಕ ಲೋಕವಳ್ಳಿ ಗ್ರಾಮದ ಸ್ಟೀವನ್ ಸಿಕ್ವೆರಾ ಎಂಬುವವರ ಕಾಫಿ ತೋಟದಲ್ಲಿ ಅಂಜಲಿ ತಾಯಿ ಒಬ್ಬರೇ ಕೂಲಿ ಕೆಲಸ ಮಾಡುತ್ತಾ ಲೈನ್ನಲ್ಲಿ ವಾಸವಾಗಿರುವ ವಿಷ್ಯ ತಿಳಿಯುತ್ತಿದ್ದಂತೆ ಅಂಜುಲಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.
ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ತಾಯಿಯನ್ನು ನೋಡಿ ಜೋರಾಗಿ ಅಳುತ್ತಾ ಓಡೋಡಿ ಬಂದು ಅಮ್ಮನ್ನು ಬಿಗಿದಪ್ಪಿಕೊಂಡು ಮುತ್ತಿಟ್ಟು ಭಾವುಕರಾದರು. ಇನ್ನೆಂದೂ ಮಗಳ ಮುಖ ನೋಡಲು ಸಾಧ್ಯವೇ ಇಲ್ಲ ಎಂದೇ ಭಾವಿಸಿದ್ದ ತಾಯಿಗೂ, ಮಗಳು ದಿಢೀರ್ ಪ್ರತ್ಯಕ್ಷವಾಗಿದ್ದನ್ನು ನೋಡಿ ಆನಂದಬಾಷ್ಪ ಸುರಿಸಿದರು. ಮಗಳೇ ಅನ್ನೋದು ಗೊತ್ತಾಗ್ತಿದ್ದಂತೆ ತಬ್ಬಿ, ಮುತ್ತಿಟ್ಟು ಕಣ್ಣೀರಿಟ್ಟಿದ್ದಾರೆ. ಅಮ್ಮ-ಮಗಳ ಸಮಾಗಮನ ನೋಡಿ ನೆರೆದಿದ್ದವರೆಲ್ಲ ಮೂಕವಿಸ್ಮಿತರಾದರು.
ಅಂಜಲಿಯ ತಂದೆ ಕಾಳಿಮುತ್ತು 2017ರಲ್ಲೇ ಮೃತಪಟ್ಟಿದ್ದಾರೆ. ಚೈತ್ರಾ ಮತ್ತು ಕಾಳಿಮುತ್ತು ದಂಪತಿಗೆ 7 ಹೆಣ್ಣು, 4 ಗಂಡು ಮಕ್ಕಳು. ಅವರೆಲ್ಲರಿಗೂ ಮದುವೆಯಾಗಿದ್ದು, ಬೇರೆಡೆ ವಾಸವಿದ್ದಾರೆ. ಒಂದು ದಿನ ತಾಯಿಯೊಂದಿಗಿದ್ದು ನಾಳೆ(ಬುಧವಾರ) ತಾಯಿಯನ್ನು ಕೇರಳಕ್ಕೆ ಹೋಗುವುದಾಗಿ ಅಂಜಲಿ ವಿಜಯವಾಣಿಗೆ ತಿಳಿಸಿದ್ದಾರೆ. ಸಮಾಜ ಸೇವಕ ಫಿಶ್ ಮೋಣು, ಹಳೇ ಮೂಡಿಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಎಲ್.ಬಿ. ರಮೇಶ್, ದಾವೂದ್ ಇದ್ದರು.
ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…
ಮಗನನ್ನು ಅಂಗನವಾಡಿಗೆ ಸೇರಿಸಿದ ಚನ್ನಪಟ್ಟಣದ ಜಡ್ಜ್! ನ್ಯಾಯಾಧೀಶರ ನಡೆ ಕಂಡು ಉಬ್ಬೇರಿಸಿದ ಸ್ಥಳೀಯರು
ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತಾ? ಕನ್ಯಾಪೊರೆ ಇರಲಿಲ್ಲ ಅಂದ್ರೆ ಏನರ್ಥ?