ಕೊಳ್ಳೇಗಾಲ: ಮಹಾಮಾರಿ ಕರೊನಾದಿಂದ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದ ಮಹಿಳೆಗೆ ಮೃತನ ಸ್ನೇಹಿತ ಹೊಸ ಬಾಳು ನೀಡಿದ್ದಾನೆ. ಆಕೆಗೆ 7 ವರ್ಷದ ಮಗನಿದ್ದರೂ ಕೈಹಿಡಿದು ದಿಕ್ಕೆಟ್ಟವರಿಗೆ ಆಸರೆಯಾಗಿದ್ದಾನೆ. ಇಂತಹ ಪ್ರಸಂಗ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಸಾರ್ವಜನಕಿರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರ್ತಿದೆ. ಸಂಸಾರ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.
ಮಳ್ಳೂರಿನ ಗ್ರಾಮದ ನಿವಾಸಿ ಚೇತನ್ ಕುಮಾರ್(41) ಮತ್ತು ಹನೂರಿನ ಅಂಬಿಕಾ(30) ಅವರು 8 ವರ್ಷದ ಹಿಂದೆ ವಿವಾಹವಾಗಿ ಬೆಂಗಳೂರಿನಲ್ಲಿ ವಾಸವಿದ್ದರು. ಇವರಿಗೆ 7 ವರ್ಷದ ಮಗನಿದ್ದಾನೆ. ಕೋವಿಡ್ 2ನೇ ಅಲೆಯಲ್ಲಿ ಚೇತನ್ಕುಮಾರ್ ಮೃತಪಟ್ಟರು.
ಗಂಡನ ಸಾವಿನಿಂದ ಅಂಬಿಕಾ ಮಾನಸಿಕವಾಗಿ ಅಸ್ವಸ್ಥರಾದರು. ಅವರನ್ನು ಸಂತೈಸುವಲ್ಲಿ ಮೃತ ಚೇತನ್ಕುಮಾರ್ ಸ್ನೇಹ ಬಳಗ ಸಾಕಷ್ಟು ಶ್ರಮಿಸಿತು. ಕಂಗಾಲಾಗಿದ್ದ ಅಂಬಿಕಾ ಅವರಿಗೆ ಹೊಸ ಬಾಳು ನೀಡುವ ನಿಟ್ಟಿನಲ್ಲಿ ಚಾಮರಾಜನಗರ ತಾಲೂಕಿನ ನಂಜೇದೇವನಪುರದ ಲೋಕೇಶ್ ಸಂಕಲ್ಪ ಮಾಡಿದರು. ಜ.27ರಂದು ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ಮಠದಲ್ಲಿ ಅಂಬಿಕಾ ಅವರನ್ನು ವಿವಾಹವಾಗಿ ಮಾನವೀಯತೆ ಮೆರೆದರು.
ಚೇತನ್ಕುಮಾರ್ ಮತ್ತು ಲೋಕೇಶ್ಗೆ 13 ವರ್ಷದ ಹಿಂದಿನಿಂದಲೂ ಗೆಳೆತನವಿತ್ತು. ಬೆಂಗಳೂರಿನ ಸರ್ಪಭೂಷಣ ಶಿವಯೋಗಿ ಮಠದ ಹಾಸ್ಟೆಲ್ನಲ್ಲಿ ಇಬ್ಬರೂ ಒಟ್ಟಿಗಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು. ಸರ್ಪಭೂಷಣ ಶಿವಯೋಗಿ ಸಂಸ್ಥೆಯಲ್ಲೇ ಲೋಕೇಶ್ ಉದ್ಯೋಗ ಆರಂಭಿಸಿದರು. ಚೇತನ್ ಕುಮಾರ್ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದರೂ ಇಬ್ಬರ ನಡುವೆ ಸ್ನೇಹ ಮುಂದುವರಿದಿತ್ತು. ಸ್ನೇಹಿತನ ಪತ್ನಿ ಅತಂತ್ರವಾಗಬಾರದು ಎಂಬ ಧ್ಯೇಯದಿಂದ ಆಕೆಗೆ ಲೋಕೇಶ್ ಹೊಸ ಬಾಳು ನೀಡಿದ್ದಾರೆ.
ಅಪ್ರಾಪ್ತ ನಾದಿನಿಯನ್ನ ಲೈಂಗಿಕವಾಗಿ ಬಳಸಿ ವಿಕೃತಿ ಮೆರೆದ ಬಾವ! ಪ್ರಸವಪೂರ್ವ ಹೆರಿಗೆಯಾದ ಮಗು ಸಾವು