ಚಿಕ್ಕಬಳ್ಳಾಪುರ: ತಾಲೂಕಿನ ರಾಮದೇವರಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ 44ರ ಪಕ್ಕದ ಪ್ರವೀಣ್ ಹೋಟೆಲ್ ಬಳಿ ಶನಿವಾರ ಬೆಳಗ್ಗೆ ನಿಂತಿದ್ದ ಬೈಕ್ ಮತ್ತು ಕಾರುಗಳಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಗರ್ಭದಲ್ಲಿದ್ದ ಮಗು ಸೇರಿ ಮೂವರು ಮೃತಪಟ್ಟಿದ್ದಾರೆ.
ಪ್ರಣವ್ ಹೋಟೆಲ್ನ ಸೆಕ್ಯೂರಿಟಿ ಗಾರ್ಡ್ ನಾರಾಯಣಸ್ಚಾಮಿ(55), ಬೈಕ್ ಸವಾರ ಪಿ.ಚೊಕ್ಕನಹಳ್ಳಿ ನಿವಾಸಿ ಜನಾರ್ದನ (30) ಮೃತರು. ಬೆಂಗಳೂರಿನ ಕಾಡುಗುಡಿ ನಿವಾಸಿ ಮಾನಸ ಹಾಗೂ ಇವರ ಮಾವ ನರಸಿಂಹ ಅವರ ಸ್ಥಿತಿ ಗಂಭೀರವಾಗಿದೆ. ಮಾನಸ ಗರ್ಭದಲ್ಲಿದ್ದ ಮಗು ಮೃತಪಟ್ಟಿದೆ.
ಹೋಟೆಲ್ ಬಳಿ ತಿಂಡಿ ತಿನ್ನಲು ಪ್ರಯಾಣಿಕರು ಕಾರು, ಬೈಕ್ ನಿಲ್ಲಿಸಿದ್ದರು. ಕಾರಿನಲ್ಲಿ ಬಂದ ಮಾನಸ ಕುಟುಂಬವೂ ಹೋಟೆಲ್ ಬಳಿ ಕಾರು ನಿಲ್ಲಿಸಿತ್ತು. ಇನ್ನೇನು ಹೋಟೆಲ್ ಒಳಗೆ ಹೋಗಬೇಕು ಅನ್ನುವಷ್ಟರಲ್ಲಿ ಜವರಾಯನಂತೆ ಟ್ಯಾಂಕರ್ ಹೋಟೆಲ್ನತ್ತ ನುಗ್ಗಿ, ಕಾರು ಮತ್ತು ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. 5 ಕಾರುಗಳು ಜಖಂ ಆಗಿವೆ. ಸ್ಥಳದಲ್ಲೇ ಬೈಕ್ ಸವಾರ ಮತ್ತು ಹೋಟೆಲ್ ಸೆಕ್ಯೂರಿಟಿಗಾರ್ಡ್ ಮೃತಪಟ್ಟಿದ್ದಾರೆ. ಬೆಂಗಳೂರಿನ ಕಾಡುಗುಡಿಯ ಗರ್ಭಿಣಿ ಮಾನಸ ಮತ್ತು ಇವರ ಮಾವ ನರಸಿಂಹಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನಸರ ಗರ್ಭದಲ್ಲೇ ಮಗು ತೀರಿಕೊಂಡಿದೆ. ಅಪಘಾತದ ವೇಳೆ ಇವರ ಜತೆಯಲ್ಲಿದ್ದ ಮಾನಸರ ಮೊತ್ತೊಬ್ಬ ಮಗ ಅಪಾಯದಿಂದ ಪಾರಾಗಿದೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ ಭೇಟಿ ಪರಿಶೀಲನೆ ನಡೆಸಿದರು. ಅಡ್ಡ ಬಂದ ಎಕೊ ಸ್ಪೋರ್ಟ್ ಕಾರನ್ನು ತಪ್ಪಿಸಲು ಹೋಗಿ ಕ್ಯಾಂಟರ್ ಹೋಟೆಲ್ನತ್ತ ನುಗ್ಗಿ ಈ ಅವಘಡ ಸಂಭವಿಸಿದೆ. ಕ್ಯಾಂಟರ್ ಚಾಲಕನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹೇಳಿದರು.(ದಿಗ್ವಿಜಯ ನ್ಯೂಸ್)
ತುಮಕೂರಿನ ಮಹಿಳಾ ಪೇದೆ ಹಾಸನದಲ್ಲಿ ಶವವಾಗಿ ಪತ್ತೆ! ಅಕ್ಕನನ್ನೇ ಕೊಂದು ಲಾಡ್ಜ್ನಲ್ಲಿ ದುರಂತ ಅಂತ್ಯ ಕಂಡ ತಮ್ಮ