ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಹಸೀಲ್ದಾರ್ ವರ್ಗಾವಣೆ ವಿಚಾರ ತಾಲೂಕಿನಲ್ಲಿ ಉಭಯ ನಾಯಕರ ಕದನ ಮತ್ತೆ ಮುನ್ನಲೆಗೆ ಬಂದಿದೆ. ಕಾರಣವಾಗಿದ್ದು, ಈ ವಿಚಾರದಲ್ಲಿ ತಹಸೀಲ್ದಾರ್ಗಳು ನೆಪಮಾತ್ರವಾದರೂ ಎಚ್ಡಿಕೆ ಮತ್ತು ಸಿಪಿವೈ ನಡುವಿನ ಜಂಗೀಕುಸ್ತಿಗೆ ವೇದಿಕೆಯಾಗಿ ಪರಿಣಮಿಸಿದೆ. ಶುಕ್ರವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸಿಪಿವೈ ಕೈ ಮೇಲಾಗಿದ್ದು, ಈ ಹಿಂದಿನ ಬೆಳವಣಿಗೆಗಳನ್ನು ಗಮನಿಸಿದರೆ ನಾಳೆ ಏನು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿ ಇದೆ.
ಚನ್ನಪಟ್ಟಣ ತಹಸೀಲ್ದಾರ್ ಎಲ್.ನಾಗೇಶ್ ಕೊನೆಗೂ ವರ್ಗಾವಣೆಗೊಂಡಿದ್ದಾರೆ. ಈ ಸ್ಥಾನಕ್ಕೆ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಕೆ.ಸುದರ್ಶನ್ ನಿಯೋಜನೆಗೊಂಡಿದ್ದಾರೆ. ಕಂದಾಯ ಇಲಾಖೆ ಕಾರ್ಯದರ್ಶಿ ಜಿ.ಎನ್.ಸುಶೀಲ ಶುಕ್ರವಾರ ಈ ಆದೇಶ ಹೊರಡಿಸಿದ್ದು, ತಕ್ಷಣ ಜಾರಿಗೆ ಬರುವಂತೆ ಸುದರ್ಶನ್ ಅವರನ್ನು ತಹಸೀಲ್ದಾರ್ ಆಗಿ ನಿಯೋಜನೆಗೊಳ್ಳುವಂತೆ ಹಾಗೂ ನಾಗೇಶ್ ಅವರನ್ನು ತಕ್ಷಣ ಸರ್ಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ರಾಜಕೀಯ ಜಂಗೀಕುಸ್ತಿ: ತಹಸೀಲ್ದಾರ್ ವರ್ಗಾವಣೆ ವಿಚಾರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಎಲ್.ನಾಗೇಶ್ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸುದರ್ಶನ್ ಪರವಾಗಿ ಸಿ.ಪಿ.ಯೋಗೇಶ್ವರ್ ಲಾಬಿ ನಡೆಸುವ ಮೂಲಕ ಈ ಹುದ್ದೆಯನ್ನು ತಮ್ಮ ಕಡೆಯವರೇ ಅಲಂಕರಿಸಬೇಕು ಎಂಬ ಹಠಕ್ಕೆ ಬಿದ್ದಿದ್ದರು. ಕಳೆದ ಎರಡು ವರ್ಷಗಳಿಂದ ಈ ಕ್ಷೇತ್ರದಲ್ಲೇ ಇದ್ದ ತಹಸೀಲ್ದಾರ್ ನಾಗೇಶ್ ಕೊನೆಗೂ ವರ್ಗಾವಣೆಗೊಂಡಿದ್ದು, ತಹಸೀಲ್ದಾರ್ ವರ್ಗಾವಣೆ ವಿಚಾರದಲ್ಲಿ ಯೋಗೇಶ್ವರ್ ಕೈ ಮೇಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಮುಖಭಂಗ: ಕಳೆದ ಏ.8ರಂದು ತಹಸೀಲ್ದಾರ್ ಎಲ್.ನಾಗೇಶ್ ಅವರನ್ನು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಸುದರ್ಶನ್ ಅವರನ್ನು ನಿಯೋಜಿಸಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಸುದರ್ಶನ್ ನೇಮಕ ರದ್ದುಗೊಳಿಸಿ ನಾಗೇಶ್ ಅವರೇ ಮುಂದುವರಿಯುತ್ತಾರೆ ಎಂದು ಮತ್ತೊಂದು ಆದೇಶ ಹೊರಬಿದ್ದಿತ್ತು. ಮುಖ್ಯಮಂತ್ರಿಗಳಿಂದ ಅನುಮೋದಿತವಾಗಿದ್ದ ಆದೇಶ ಕೆಲವೇ ಗಂಟೆಗಳಲ್ಲಿ ರದ್ದಾಗಿದ್ದು ತಾಲೂಕಿನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ಸರ್ಕಾರದೊಂದಿಗೆ ಮಾಜಿ ಸಿಎಂ ಎಚ್ಡಿಕೆ ಅನ್ಯೂನ್ಯವಾಗಿದ್ದಾರೆ ಎಂಬ ಮಾತು ಕೇಳಿಬರುವ ಜೊತೆಗೆ, ಈ ವಿಚಾರ ಯೋಗೇಶ್ವರ್ಗೆ ಮುಖಭಂಗ ಉಂಟು ಮಾಡಿತ್ತು.
ದಿಢೀರ್ ಬೆಳವಣಿಗೆ: ಕಳೆದ ಬಾರಿ ಸರ್ಕಾರ ಆದೇಶ ಬದಲಾದ ಹಿನ್ನೆಲೆಯಲ್ಲಿ ಈ ಬಾರಿ ವರ್ಗಾವಣೆ ವಿಚಾರವನ್ನು ಗುಪ್ತವಾಗಿಡಲಾಗಿತ್ತು. ವರ್ಗಾವಣೆ ಆದೇಶ ಹೊರಬೀಳುತ್ತಿದಂತೆ ಸುದರ್ಶನ್ ದಿಢೀರ್ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿದರು. ವರ್ಗಾವಣೆ ಆದೇಶವನ್ನು ಕೊನೇ ಕ್ಷಣದವರೆಗೆ ರಹಸ್ಯವಾಗಿ ಇರಿಸಿದ್ದು ವಿಶೇಷವಾಗಿತ್ತು. ಸುದರ್ಶನ್ ಅಧಿಕಾರ ಪಡೆಯುವವರೆಗೆ ವರ್ಗಾವಣೆ ಪತ್ರ ರಹಸ್ಯವಾಗೇ ಇತ್ತು. ಇನ್ನು ತಹಸೀಲ್ದಾರ್ ನಾಗೇಶ್ಗೂ ವರ್ಗಾವಣೆ ವಿಚಾರ ಗೊತ್ತಿಲ್ಲದೆ ಎಂದಿನಂತೆ ಫೀಲ್ಡ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸುದರ್ಶನ್ ಕಚೇರಿಗೆ ಆಗಮಿಸಿರುವ ವಿಚಾರ ತಿಳಿದ ನಾಗೇಶ್ ಕಚೇರಿಯತ್ತ ಸುಳಿಯದಿರುವುದು ಕಂಡುಬಂದಿತ್ತು. ಆದರೆ, ತಹಸೀಲ್ದಾರ್ ವಾಹನ ಮಾತ್ರ ಸಂಜೆ ಕಚೇರಿಗೆ ಆಗಮಿಸಿತ್ತು.
ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ