ಚಾಮರಾಜನಗರ: ಸಾರಿಗೆ, ಆರೋಗ್ಯ ಚಿಕಿತ್ಸಾ ಸೌಲಭ್ಯವಿಲ್ಲದ ಕಾಡಂಚಿನ ಕುಗ್ರಾಮ ದೊಡ್ಡಾಣೆಗೆ ಗುರುವಾರ ವೈದ್ಯಕೀಯ ಸೇವೆಯೇ ಹುಡುಕಿಕೊಂಡು ಬಂತು. ಅಲ್ಲದೆ ಜಿಲ್ಲಾ ಆರೋಗ್ಯ ಇಲಾಖೆ ಇನ್ಮುಂದೆ ವಾರದಲ್ಲಿ ಒಂದು ದಿನ ವೈದ್ಯರೇ ರೋಗಿಗಳ ಬಳಿಗೆ ಹೋಗುವಂತೆ ಕ್ರಮ ಕೈಗೊಂಡಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸಮೀಪದ ದೊಡ್ಡಾಣೆ ಗ್ರಾಮಸ್ಥರು ಜ್ವರ, ಶೀತ, ನೆಗಡಿ, ಕೆಮ್ಮು, ತಲೆ, ಮೈ ಕೈನೋವಿನಿಂದ ಬಳಲುತ್ತಿದ್ದಾರೆ. ಒಂದೆಡೆ ದುರ್ಗಮ ಹಾದಿಯಲ್ಲಿ ಸಾರಿಗೆ ಸೌಲಭ್ಯವಿಲ್ಲ, ಮತ್ತೊಂದೆಡೆ ರೋಗಿಗಳನ್ನು ಡೋಲಿ ಕಟ್ಟಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವವರಿಗೂ ಆರೋಗ್ಯ ಹದಗೆಟ್ಟಿದೆ. ಈ ಕುರಿತು ವಿಜಯವಾಣಿ ಜ.27ರಂದು “ಕಾಡಂಚಿನ ಈ ಊರಿಗೆ ಊರೇ ಅನಾರೋಗ್ಯ ಪೀಡಿತ” ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ನೂತನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ವಿಶೇಷಾಧಿಕಾರಿಗಳ ಕಚೇರಿಗೆ ಸುದ್ದಿ ತಲುಪಿದ್ದೇ ತಡ ಒಂದೇ ದಿನದಲ್ಲಿ ಹಳ್ಳಿಗರಿಗೆ ತುತ್ತಾಗಿ ಆರೋಗ್ಯ ಸೇವೆ ದೊರೆಯಿತು. ಸಚಿವರ ಸೂಚನೆ ಮೇರೆಗೆ ಎಚ್ಚೆತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್, ಸಮುದಾಯ ಆರೋಗ್ಯ ಅಧಿಕಾರಿ, ಶುಶ್ರೂಷಕ, ಆಶಾ ಕಾರ್ಯಕರ್ತೆಯರನ್ನು ಗ್ರಾಮಕ್ಕೆ ಕಳುಹಿಸಿತ್ತು.
ಇವರು ಸರ್ಕಾರಿ ಶಾಲೆಯಲ್ಲಿ 60ರಿಂದ 70 ರೋಗಿಗಳ ತಪಾಸಣೆ ನಡೆಸಿದರು. ಔಷಧಗಳನ್ನು ವಿತರಣೆ ಮಾಡಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಿದರು. ಕರೊನಾ ಪರೀಕ್ಷೆಯನ್ನೂ ನಡೆಸಲಾಗಿದೆ. ಅಲ್ಲದೇ ಬೇರೆ ಕಾರಣದಿಂದ ಜ್ವರದಿಂದ ಬಳಲುತ್ತಿರಬಹುದೇ ಎಂಬ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಯಿತು.
ಇನ್ಮುಂದೆ ವಾರದಲ್ಲಿ ಶುಕ್ರವಾರ ಅಥವಾ ಶನಿವಾರದಂದು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ನೆರವಿನೊಂದಿಗೆ ಗ್ರಾಮದಲ್ಲೇ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರ ಕ್ರಮಗಳಿಗೆ ಆರೋಗ್ಯ ಇಲಾಖೆ ಕ್ರಮ ತೆಗೆದುಕೊಳ್ಳಲಾಗಿದೆ.
| ಡಾ.ವಿಶ್ವೇಶ್ವರಯ್ಯ ಡಿಎಚ್ಒ, ಚಾಮರಾಜನಗರ
ವೈದ್ಯರ ಎಡವಟ್ಟು: ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಯುವಕನಿಗೆ ಕಾಲು ಕತ್ತರಿಸುವ ಹಂತಕ್ಕೆ ಸೋಂಕು
ಬೇಡ ಬೇಡ ಅಂದ್ರೂ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಲೇ ಹೊಗೆನಕಲ್ ಜಲಪಾತಕ್ಕೆ ಬಿದ್ದು ವಿದ್ಯಾರ್ಥಿ ಸಾವು!
ನಿರೂಪಕರ ಬದಲಾವಣೆ: ಸಿಎಂ ಮನೆ ಬಳಿ ಏಕಾಂಗಿ ಹೋರಾಟ ನಡೆಸಿದ್ದ ಡಾ.ಗಿರಿಜಾಗೆ ಮಣೆ, ಅಪರ್ಣಾಗೆ ತಪ್ಪಿದ ಅವಕಾಶ