ಬೆಳಗಾವಿ: ಪತ್ರಕರ್ತ, ಲೇಖಕ ಭೀಮಸೇನ ತೊರಗಲ್ಲ ಅವರು ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದರು.
ಭೀಮಸೇನ ತೊರಗಲ್ಲಗೆ 82 ವರ್ಷ ವಯಸ್ಸಾಗಿತ್ತು. ಇವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಅವರ ಇಚ್ಛೆಯಂತೆ ಯಾವುದೇ ವಿಧಿ-ವಿಧಾನಗಳಿಲ್ಲದೆ ಶಹಪುರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
ನಾನು ಸತ್ತ 2 ಗಂಟೆಯೊಳಗೆ ಯಾವುದೇ ವಿಧಿ-ವಿಧಾನಗಳನ್ನು ಅನುಸರಿಸದೆ ಅಂತ್ಯಕ್ರಿಯೆ ನರೆಸಬೇಕು ಎಂದು 20 ವರ್ಷದ ಹಿಂದೆಯೇ ಭೀಮಸೇನ ತೊರಗಲ್ಲ ಅವರು ಕುಟುಂಬಸ್ಥರು ಮತ್ತು ಆಪ್ತರ ಬಳಿ ಹೇಳಿಕೊಂಡಿದ್ದರು. ಅವರ ಇಚ್ಛೆಯಂತೆ ಬ್ರಾಹ್ಮಣ ಸಂಪ್ರದಾಯದ ಯಾವುದೇ ವಿಧಿ-ವಿಧಾನ ಅನುಸರಿಸದೆ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರು.
ಬೆಳಗಾವಿ ಪತ್ರಿಕೋದ್ಯಮದಲ್ಲಿ ತಮ್ಮನೇ ಆದ ಛಾಪು ಮೂಡಿಸಿರುವ ಭೀಮಸೇನ ತೊರಗಲ್ಲ ಅವರು 80ರ ದಶಕದ ಆರಂಭದಲ್ಲಿ ‘ಸಮತೋಲನ’ ಎಂಬ ಸಂಜೆಪತ್ರಿಕೆ ಆರಂಭಿಸಿದ್ದರು. ಮೊಟ್ಟ ಮೊದಲ ಬಾರಿಗೆ ಬೆಳಗಾವಿಯಲ್ಲಿ ತಮ್ಮ ಪತ್ರಿಕಾ ಕಚೇರಿಯಲ್ಲಿ ಕಂಪ್ಯೂಟರ್ ಅಳವಡಿಸಿದ್ದು ಇವರೇ. ‘ಪ್ರಚಲಿತ’ ಎಂಬ ಪತ್ರಿಕೆಯನ್ನೂ ಆರಂಭಿಸಿದ್ದರು. ಮಹಾಭಾರತ ಮಹಾಕಾವ್ಯವನ್ನ ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿ ‘ಸಂಚು’ ಎಂಬ ಕಾದಂಬರಿ, ‘ಸತ್ಯನಾರಾಯಣ ಸತ್ತ’, ‘ಅಪರಿಚಿತರು’ ಎಂಬ ನಾಟಕಗಳನ್ನ ರಚಿಸಿದ್ದಾರೆ. ಮರಾಠಿ ಪ್ರಭಾವಕ್ಕೊಳಗಾಗಿರುವ ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರ ನಡೆಸುತ್ತಾ ಯುವ ಬರೆಹಗಾರರಿಗೆ ಪ್ರೇರಕ ಶಕ್ತಿಯಾಗಿದ್ದರು.