ಬೆಂಗಳೂರು: ಅದು 2020ರ ಮಾ.11ರ ಬೆಳಗ್ಗೆ 8.45 ಸಮಯ. ಶಾಲೆಗೆ ಹೋಗಲು ಸಿದ್ಧವಾದ ಪುಟ್ಟ ಮಗಳು ರಿಚೆಲ್ ಪ್ರಿಶಾಳನ್ನು ತಂದೆ ರಾಜು ತನ್ನ ಬೈಕ್ನಲ್ಲಿ ಕರೆದೊಯ್ಯುತ್ತಿದ್ದರು. ಮಾರ್ಗಮಧ್ಯೆ ರಾಮಮೂರ್ತಿನಗರದ ಕೌಡಲಹಳ್ಳಿಯಲ್ಲಿ ಮರದ ಒಣಕೊಂಬೆ ಕೊಂಬೆ ಬಾಲಕಿ ತಲೆ ಮೇಲೆ ಬಿದ್ದು, ಗಂಭೀರ ಗಾಯಗೊಂಡಿದ್ದಳು. ಕೂಡಲೇ, ಚಿಕಿತ್ಸೆಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಬಾಲಕಿ ಕೋಮಾಗೆ ಜಾರಿದ್ದಳು. ಮಗಳನ್ನ ಉಳಿಸಿಕೊಳ್ಳಲು ಹೆತ್ತವರು ಪಟ್ಟ ಹರಸಾಹಸ ಅಷ್ಟಿಷ್ಟಲ್ಲ. ಲೆಕ್ಕವಿಲ್ಲದಷ್ಟು ಬಾರಿ ದೇವರಿಗೂ ಬೇಡಿಕೊಂಡರು. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗಳು ಜೀವಂತವಾಗಿ ವಾಪಸ್ ಬಂದೇ ಬರ್ತಾಳೆ ಎಂದು ಚಾತಕಪಕ್ಷಿಯಂತೆ ಕಾಯುತ್ತಲೇ ಇದ್ದರು… ಆದರೆ ವಿಧಿಯಾಟವೇ ಬೇರೆಯಾಗಿತ್ತು. 702 ದಿನಗಳ ಸತತ ಚಿಕಿತ್ಸೆಯ ನಂತರವೂ ಬಾಲಕಿ ಕಣ್ಣುಬಿಡಲಿಲ್ಲ… ಬಾರದ ಲೋಕಕ್ಕೆ ಹೋಗಿಯೇ ಬಿಟ್ಟಳು…
ಇಂತಹ ಕರುಣಾಜಕ ಘಟನೆ ರಾಜ್ಯರಾಜಧಾನಿ ಬೆಂಗಳೂರಲ್ಲಿ ಸಂಭವಿಸಿದೆ. ತಲೆ ಮೇಲೆ ಕೊಂಬೆ ಬಿದ್ದು ಗಾಯಗೊಂಡು ಕೋಮಾಕ್ಕೆ ಜಾರಿದ್ದ ಮಗಳಿಗೆ ಸತತ 702 ದಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಿಸಲಿಲ್ಲ. ನಿನ್ನೆ(ಫೆ.11) ಮಣಿಪಾಲ್ ಆಸ್ಪತ್ರೆಯಲ್ಲೇ 10 ವರ್ಷದ ಪ್ರಿಶಾ ಕೊನೆಯುಸಿರೆಳೆದಿದ್ದಾಳೆ. ಮಗಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡುವ ಕನಸು ಕಾಣುತ್ತಿದ್ದ ಕುಟುಂಬಕ್ಕೆ ಮಗಳ ಸಾವು ಬರಸಿಡಿಲು ಬಡಿದಂತಾಗಿದೆ.
ದೇವರು ನನಗೆ ಮಗಳನ್ನು ಕೊಟ್ಟು ಕಿತ್ತುಕೊಂಡ. ತುಂಬಾ ಆ್ಯಕ್ಟೀವ್ ಆಗಿದ್ದಳು. ಒಂದು ಕ್ಷಣದಲ್ಲಿ ಎಲ್ಲವೂ ನಾಶವಾಯ್ತು. ನನ್ನ ಮಗಳಿಗೆ ಆದ ಪರಿಸ್ಥಿತಿ ಯಾರಿಗೂ ಬರೋದು ಬೇಡ… ಎಂದು ಪ್ರಿಶಾಳ ತಾಯಿ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ದೂರು ಕೊಟ್ಟರೂ ತೆರವು ಮಾಡದ ಪಾಲಿಕೆ: ಕೌಡಲಹಳ್ಳಿ ಭಾಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಮರಗಳ ಕೊಂಬೆಗಳು ಒಣಗಿದ್ದು, ತೆರವು ಮಾಡುವಂತೆ ಪಾಲಿಕೆಯ ವಾರ್ಡ್ ಕಚೇರಿ ಮತ್ತು ನಿಯಂತ್ರಣ ಕೊಠಡಿಗೆ ಸ್ಥಳೀಯರು ದೂರು ನೀಡಿದ್ದರು. ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯಿಸಿದ್ದರು. ಪ್ರಿಶಾ ಮೇಲೆ ಕೊಂಬೆ ಬಿದ್ದು ಅಪಘಾತವಾದಾಗ ಈ ಘಟನೆಗೆ ಬಿಬಿಎಂಪಿಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ, ಪಾಲಿಕೆ ಅಕಾರಿಗಳ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸತತ ಚಿಕಿತ್ಸೆ ಹಾಗೂ ಆರೈಕೆಯ ನಡುವೆಯೂ ಕೋಮಾದಿಂದ ಚೇತರಿಸಿಕೊಳ್ಳದೆ ಬಾಲಕಿ ಮೃತಪಟ್ಟಿದ್ದು, ಸ್ಥಳೀಯರಲ್ಲಿ ನೀರವ ಮೌನ ಮಡುಗಟ್ಟಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ: ಮರದ ಕೊಂಬೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಈ ಬಗ್ಗೆ ಚಿತ್ರನಟ ಸುದೀಪ್ ಕೂಡ ಅವರ ತಂದೆಯ ಮೊಬೈಲ್ಗೆ ವಿಡಿಯೋ ಕರೆ ಮಾಡಿ ಸಾಂತ್ವನ ಹೇಳಿದ್ದರು. ಈ ಘಟನೆ ನಡೆದ ಸಿಸಿಟಿವಿ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇದನ್ನು ನೋಡಿದ ಜನ ಮರುಕ ವ್ಯಕ್ತಪಡಿಸಿ ಚೇತರಿಕೆ ಆಗಲಿ ಎಂದು ಹಾರೈಸಿದ್ದರು. ಆದರೆ, ಬಾಲಕಿ ಬದುಕುಳಿಯಲಿಲ್ಲ ಎನ್ನುವುದು ದುಖಃಕರ ಸಂಗತಿ.
ಒಣಮರದ ಕೊಂಬೆ ಬಿದ್ದು 702 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಚೆಲ್ ಪ್ರಿಶಾ ಉಸಿರು ಚೆಲ್ಲಿರುವ ವಿಚಾರ ದುಖಃಕರ. ಆಸ್ಪತ್ರೆಗೆ ಭೇಟಿ ನೀಡಿ ಕ್ಷೇಮ ವಿಚಾರಿಸಲಾಗಿತ್ತು. ಕಂದಮ್ಮನಿಗೆ ಭಗವಂತ ಚಿರಶಾಂತಿ ಕರುಣಿಸಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
| ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ
ಮರ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ದುರದೃಷ್ಟಕರವಾಗಿದ್ದು, ಬಾಲಕಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಪಾಲಿಕೆ ಭರಿಸಲಿದೆ. ಘಟನೆ ನಡೆದ ವೇಳೆ ಯಾವ ರೀತಿಯ ಪರಿಹಾರ ಘೋಷಣೆ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು.
|ಗೌರವ್ ಗುಪ್ತ ಬಿಬಿಎಂಪಿ ಮುಖ್ಯ ಆಯುಕ್ತ
ಅಪ್ಪು ಆಗಮನಕ್ಕಾಗಿ ಕಾಯುತ್ತಿದೆ ಹಿರಿಯ ಜೀವ! ಪುನೀತ್ ಅಗಲಿರುವ ವಿಷಯವೇ ಗೊತ್ತಿಲ್ಲ… ಮನಕಲಕುತ್ತೆ ಈ ಸ್ಟೋರಿ
ಟಿಕ್ಟಾಕ್ ಸ್ಟಾರ್ ಕಮಲಜ್ಜಿ ನಿಧನ: ಇಳಿವಯಸ್ಸಲ್ಲೂ ಸಹಸ್ರಾರು ಜನರನ್ನು ನಗಿಸುತ್ತಿದ್ದ ಅಜ್ಜಿ
ಯೋಗ ಕ್ಲಾಸ್ನಲ್ಲಿ ಪರಪುರಷನ ಜತೆ ಲವ್ವಿಡವ್ವಿ! ಪತ್ನಿಯ ಈ ಅಸಹ್ಯ ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ