ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಶನಿವಾರ ಆಜಾದಿಕಾ ಅಮೃತ ಮಹೋತ್ಸವದ ಸಡಗರ ಕಂಡು ಬಂತು.
ಬೆಳಗ್ಗೆಯಿಂದಲೇ ಮನೆ, ಮನೆಗಳ ಮೇಲೆ ತ್ರಿವರ್ಣ ಧ್ವಜ ರಾರಾಜಿಸುತ್ತಿರುವುದು ಕಂಡು ಬಂತು. ಮಕ್ಕಳು, ಹಿರಿಯರು ಹಬ್ಬದ ಸಂಭ್ರಮದಂತೆ ತ್ರಿವರ್ಣ ಧ್ವಜಗಳನ್ನು ಖರೀದಿಸಿ ಮನೆಗಳ ಮೇಲೆ ಕಟ್ಟಿ ಸೆಲ್ಯೂಟ್ ಮಾಡಿದರು. ಪ್ರತಿ ಒಣಿಯ ಮನೆಗಳ ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆಯೂ ರಾಷ್ಟ್ರ ಧ್ವಜ ಹಾರಾಡುತ್ತಿರುವುದನ್ನು ನೋಡುವುದೇ ಸಂಭ್ರಮವಾಗಿತ್ತು. ತಾಲೂಕಿನ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ತಾಲೂಕು ಕಚೇರಿಗಳಲ್ಲಿ ಧ್ವಜಾರೋಹಣ ನಡೆಯಿತು.
ಸ್ಟೇಟಸ್ನಲ್ಲಿ ತಿರಂಗಾ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಡೀ ವಾತಾವರಣ ತ್ರಿವರ್ಣ ಧ್ವಜಮಯವಾಗಿದ್ದು, ಮನೆಯ ಮೇಲೆ ತಿರಂಗಾ ಹಾರಿಸಿದವರು ತಮ್ಮ ಸ್ಟೇಟಸ್ನಲ್ಲಿ ಫೋಟೋಗಳು ಹಾಕಿ ಖುಷಿಪಟ್ಟರು. ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನ ಬಳಿಯ 16ನೇ ವಾರ್ಡ್ನ ಕಡು ಬಡತನದ ವಡೇರಹಳ್ಳಿ ರೇವಣ್ಣ ತನ್ನ ಮುರುಕಲು ಮನೆಯ ಛಾವಣಿ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದು, ಸಾರ್ವಜನಿಕರು ಕೊಂಡಾಡಿದರು.