ಕೊಲಂಬೊ: ಅಗತ್ಯ ವಸ್ತುಗಳ ಕೊರತೆ ಹಾಗೂ ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಶ್ರೀಲಂಕಾದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ ಘೋಷಣೆಯಾಗಿದ್ದು, ಭಾನುವಾರ ತಡರಾತ್ರಿ ಪ್ರಮುಖ ಬೆಳವಣಿಗೆ ಸಂಭವಿಸಿದೆ. ತಡರಾತ್ರಿ ನಡೆದ ಸಭೆಯಲ್ಲಿ ಶ್ರೀಲಂಕಾದ ಕ್ಯಾಬಿನೆಟ್ನ 26 ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಆದರೆ, ಮಹಿಂದಾ ರಾಜಪಕ್ಸೆ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.
‘ಶ್ರೀಲಂಕಾದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರಧಾನ ಮಂತ್ರಿ ಹಾಗೂ ಅಧ್ಯಕ್ಷರಿಗೆ ಸಹಾಯವಾಗಲಿದೆ ಎಂಬ ಭರವಸೆಯಿಂದ ನಾನು ಎಲ್ಲ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ’ ಎಂದು ಯುವಜನ ಮತ್ತು ಕ್ರೀಡಾ ಸಚಿವರೂ ಆದ, ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಹಿರಿಯ ಪುತ್ರ ನಮಲ್ ರಾಜಪಕ್ಸೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆಥಿರ್ಕ ಬಿಕ್ಕಟ್ಟು ಬಿಗಡಾಯಿಸಿರುವ ಶ್ರೀಲಂಕಾದಲ್ಲಿ ಜೀವನಾವಶ್ಯಕ ಸಾಮಗ್ರಿ ಬೆಲೆ ಅಕ್ಷರಶಃ ಗಗನಕ್ಕೇರುತ್ತಿವೆ. ಒಂದು ಕೆಜಿ ಅಕ್ಕಿಯ ಬೆಲೆ 220 ರೂಪಾಯಿ ಹಾಗೂ ಒಂದು ಕೆಜಿ ಹಾಲಿನ ಪುಡಿ ದರ 1,900 ರೂಪಾಯಿ ಆಗಿದೆ. ಸಕ್ಕರೆ ಕೆಜಿಗೆ 240 ರೂ. ಹಾಗೂ ಕೊಬ್ಬರಿ ಕೆಜಿಗೆ 850 ರೂ. ಆಗಿದೆ. ಅಕ್ಕಿ, ಗೋಧಿ, ತರಕಾರಿ ಮುಂತಾದ ಅಗತ್ಯ ಸಾಮಗ್ರಿಗಳ ಬೆಲೆಯೇರಿಕೆ ಜನಸಾಮಾನ್ಯರನ್ನು ತೀವ್ರವಾಗಿ ಬಾಧಿಸುತ್ತಿದೆ.
12ಕ್ಕೂ ಹೆಚ್ಚು ಪ್ರತಿಪಕ್ಷ ಸಂಸದರು ಭಾನುವಾರ ರಾಜಧಾನಿ ಕೊಲಂಬೋದಲ್ಲಿ ಪ್ರತಿಭಟನಾ ಮೆರವಣಿ ನಡೆಸಿದರು. ಇದನ್ನು ಬೆಂಬಲಿಸಿ ನೂರಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಂಡಿದ್ದರು. ಅಧ್ಯಕ್ಷ ರಾಜಪಕ್ಸ ವಿರುದ್ಧ ಜನಾಭಿಪ್ರಾಯ ತಡೆಯುವ ನಿಟ್ಟಿನಲ್ಲಿ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್ ಮತ್ತು ಯೂಟ್ಯೂಬ್ ಸಹಿತ ವಿವಿಧ ಸಾಮಾಜಿಕ ಮಾಧ್ಯಮಗಳನ್ನು ಲಂಕಾ ಸರ್ಕಾರ ಶನಿವಾರವೇ ಬ್ಲಾಕ್ ಮಾಡಿತ್ತು.