ಬೆಂಗಳೂರು: ಕನ್ನಡ ರಾಜ್ಯೋತ್ಸವ ಎಂದರೆ ಕರ್ನಾಟಕದ ಬಹುದೊಡ್ಡ ಸಂಭ್ರಮ. ಕರುನಾಡಿನಾದ್ಯಂತ ಕನ್ನಡದ್ದೇ ಕಲರವ. ಆದರೆ ಅದನ್ನು ಅನಿವಾಸಿ ಭಾರತೀಯರನೇಕರು ಕರ್ನಾಟಕದ ಹೊರಗಿದ್ದೂ ‘ವಿಶ್ವ ಕನ್ನಡ ಸಾಂಸ್ಕೃತಿಕ ಹಬ್ಬ’ವೆಂದು ಅದ್ದೂರಿಯಾಗಿ ಆಚರಿಸಿದ್ದಾರೆ.
ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಆದಿಚುಂಚನಗಿರಿಯ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ತಾಯಿ, ತಾಯ್ನೆಲ, ತಾಯ್ನುಡಿ ಎಲ್ಲಕ್ಕಿಂತ ಮಿಗಿಲು ಎಂದು ನಿರ್ಮಲಾನಂದನಾಥ ಸ್ವಾಮೀಜಿ ನಾಡು-ನುಡಿಯ ಮಹತ್ವದ ಕುರಿತು ಮಾತನಾಡಿದರು. ಕನ್ನಡ ನಾಡು ಸುಂದರವಾದ ವಿಶಾಲ ಭೂಪ್ರದೇಶ, ಇಲ್ಲಿನ ಸಂಸ್ಕೃತಿ ಮಹೋನ್ನತವಾದುದು. ಕನ್ನಡಿಗರು ಜಗತ್ತಿನಾದ್ಯಂತ ಕಂಪನ್ನು ಪಸರಿಸಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಅವರು ಎಚ್ಎನ್ಬಿಸಿ-ಯುಕೆ ತಂಡವನ್ನು ಶ್ಲಾಘಿಸಿದರು.
ಹರೀಶ್ ರಾಮಯ್ಯ ಅವರ ಎಚ್ಎನ್ಬಿಸಿ-ಯುಕೆ ನೇತೃತ್ವದ ತಂಡದಿಂದ ಆಯೋಜಿಸಲಾಗಿದ್ದ ಈ ವಿಶೇಷ ಕನ್ನಡ ರಾಜ್ಯೋತ್ಸವ ಅಂತರ್ಜಾಲ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿದೆ. ನ್ಯೂಯಾರ್ಕ್ ಸಿಟಿಯ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಭಾಸ್ಕರ್ ಶೆಟ್ಟಿ ಅವರು ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವ ಆರಂಭಿಸಿದರು.
ಕರ್ನಾಟಕದಲ್ಲಿ ರಾಜ್ಯೋತ್ಸವ ದಿನವಿಡೀ ಆಚರಣೆ ಆಗುವುದು ಸಹಜ. ಮಾತ್ರವಲ್ಲ, ನವಂಬರ್ ತಿಂಗಳಿಡೀ ಅಲ್ಲಲ್ಲಿ ರಾಜ್ಯೋತ್ಸವ ಆಚರಣೆ ಆಗುತ್ತಲೇ ಇರುತ್ತದೆ. ಅದೇ ರೀತಿ ಈ ಕಾರ್ಯಕ್ರಮ ಕೂಡ ಮ್ಯಾರಥಾನ್ನಂತೆ ಸುದೀರ್ಘವಾಗಿ ನಡೆದಿದೆ. ಇದು ಒಂದೆರಡು ಗಂಟೆಗಳ ಕಾರ್ಯಕ್ರಮವಲ್ಲ. ಬರೋಬ್ಬರಿ 18ರಿಂದ 20 ಗಂಟೆಗಳ ಕಾಲ ನೆರವೇರಿದೆ. ಫೇಸ್ಬುಕ್, ಯೂ-ಟ್ಯೂಬ್ ಎರಡರಲ್ಲೂ ಇದು ಲೈವ್ ಪ್ರಸಾರಗೊಂಡಿದೆ.
ಆಸ್ಟ್ರೇಲಿಯಾ, ಯುರೋಪ್, ಆಫ್ರಿಕ ಅಮೆರಿಕ ಹೀಗೆ ಜಗತ್ತಿನ ವಿವಿಧೆಡೆ ನೆಲೆಸಿರುವ ಕನ್ನಡಿಗರಲ್ಲದೆ ವಿದೇಶಿಯರೂ ಕೆಲವರು ಭಾಗವಹಿಸಿದ್ದು ಈ ಕಾರ್ಯಕ್ರಮದ ವಿಶೇಷ. ಅದರಲ್ಲೂ ಇಟಲಿ ಟಿಜಿಯಾನ ರಿಪೇರಿ ಅವರು ವಾಚನ ಮಾಡಿದ ಕನ್ನಡ ಕವಿತೆ ಮತ್ತು ಜಿಯಾನ ಗಿರಾಲ್ಡಿ ಮಧುರವಾಗಿ ಹಾಡಿದ “ಯಾವ ಜನ್ಮದ ಮೈತ್ರಿ” ನೋಡುಗರ ಮೈಮನಗಳನ್ನು ರೋಮಾಂಚನಗೊಳಿಸಿದವು ಎನ್ನುತ್ತಾರೆ ನ್ಯೂಯಾರ್ಕ್ನಲ್ಲಿರುವ ನೆಲೆಸಿರುವ ಕನ್ನಡಿಗ ಬೆಂಕಿ ಬಸಣ್ಣ.