ನವದೆಹಲಿ: ಕರೊನಾ ವೈರಸ್ ವಿರುದ್ಧ ಹೋರಾಟದ ಅಸ್ತ್ರವಾಗಿ ಕೇಂದ್ರ ಸರ್ಕಾರ ರೂಪಿಸಿರುವ ಆರೋಗ್ಯ ಸೇತು ಆ್ಯಪ್ ಅನ್ನು ಲಕ್ಷಾಂತರ ಭಾರತೀಯರು ತಮ್ಮ ಮೊಬೈಲ್ಗಳಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ.
ಆರೋಗ್ಯ ಸೇತು ವೆಬ್ಸೈಟ್ ಪ್ರಕಾರ ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆ್ಯಪ್ ಅಭಿವೃದ್ಧಿಪಡಿಸಿದೆ ಎಂಬ ಮಾಹಿತಿ ಇದೆ. ಆದರೆ, ಆ್ಯಪ್ ಅಭಿವೃದ್ಧಿ ಪಡಿಸಿದವರು ಯಾರು ಎಂಬ ಆರ್ಟಿಐ ಅರ್ಜಿಯಲ್ಲಿನ ಪ್ರಶ್ನೆಗೆ ಎರಡು ಇಲಾಖೆಯು ಈ ಬಗ್ಗೆ ನಮಗೆ ತಿಳಿದಿಲ್ಲ ಎಂದು ಉತ್ತರ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಆ್ಯಪ್ ವಿಚಾರದಲ್ಲಿ ಕೇಂದ್ರ ಸರ್ಕಾರ ನುಣುಚಿಕೊಳ್ಳವ ಉತ್ತರ ನೀಡುತ್ತಿರುವುದನ್ನು ಮನಗಂಡ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಈ ನಿಟ್ಟಿನಲ್ಲಿ ನಿಖರ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಹೊರಡಿಸಿದೆ. ಮಾಹಿತಿ ನೀಡಲು ಅಧಿಕಾರಿಗಳ ನಿರಾಕರಣೆಯನ್ನು ಸ್ವೀಕರಿಸಲಾಗದು ಎಂದು ಎನ್ಐಸಿ ನೋಟಿಸ್ನಲ್ಲಿ ಹೇಳಿದೆ.
ಆ್ಯಪ್ ಅನ್ನು ಯಾರು ಸೃಷ್ಟಿಸಿದರು ಮತ್ತು ಇದಕ್ಕೆ ಸಂಬಂಧಿಸಿದ ಫೈಲ್ಗಳು ಎಲ್ಲಿವೆ ಎಂಬ ಪ್ರಶ್ನೆಗೆ ಯಾವುದೇ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸಹ ವಿವರಣೆಯನ್ನು ನೀಡಿಲ್ಲ. ನಿಜಕ್ಕೂ ಇದು ವಿವೇಚನಾರಹಿತವಾದದ್ದು ಎಂದು ಅಸಮಾಧಾನ ಹೊರಹಾಕಿರುವ ಎನ್ಐಸಿ ನವೆಂಬರ್ 24ರಂದು ಸಂಬಂಧಪಟ್ಟ ಇಲಾಖೆಗಳು ಕಚೇರಿಗೆ ಹಾಜರಾಗಲು ಕೇಳಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ಮೂಗೊಳಗೆ ಹಾಕುವ ಮಾಸ್ಕ್!
ಆರ್ಟಿಐ ಕಾರ್ಯಕರ್ತ ಸೌರವ್ ದಾಸ್ ಎನ್ಐಸಿಗೆ ದೂರು ಸಲ್ಲಿಸಿ, ಆ್ಯಪ್ ಕುರಿತಾದ ಪ್ರಶ್ನೆಗೆ ಅನೇಕ ಸಚಿವಾಲಯಗಳು ಉತ್ತರ ನೀಡಲು ವಿಫಲವಾಗಿವೆ ಎಂದು ಆರೋಪಿಸಿದ್ದಾರೆ. ಆ್ಯಪ್ನ ಮೂಲ, ಅದರ ಅನುಮೋದನೆ ವಿವರಣೆ, ಅದರಲ್ಲಿ ಒಳಗೊಂಡಿರುವ ಕಂಪನಿಗಳು, ವೈಯಕ್ತಿಕ ಮತ್ತು ಸರ್ಕಾರದ ಇಲಾಖೆಗಳು ಮತ್ತು ಆ್ಯಪ್ ಅಭಿವೃದ್ಧಿಯಲ್ಲಿ ಒಳಗೊಂಡಿರುವ ಖಾಸಗಿ ವ್ಯಕ್ತಿಗಳೊಂದಿನ ಸಂಭಾಷಣೆ ಕುರಿತಾದ ದಾಖಲೆಗಳನ್ನು ನೀಡುವಂತೆ ಸೌರವ್ ದಾಸ್ ಆರ್ಟಿಐ ಅರ್ಜಿ ಸಲ್ಲಿಸಿದ್ದರು.
ಸುಮಾರು ಎರಡು ತಿಂಗಳವರೆಗೆ ಸೌರವ್ ಅವರ ಅರ್ಜಿ ಅನೇಕ ಇಲಾಖೆಗಳಲ್ಲಿ ಸುತ್ತಾಡಿಕೊಂಡು ಬಂದಿರುವುದಾದರೂ ಯಾವೊಂದು ಇಲಾಖೆಯು ಸಹ ಸಮರ್ಪಕ ಉತ್ತರ ನೀಡಿಲ್ಲ. ಆ್ಯಪ್ ಸೃಷ್ಟಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯುಳ್ಳ ಫೈಲ್ ನಮ್ಮ ಬಳಿಯಿಲ್ಲ ಎಂದು ಎನ್ಐಸಿ ಸಹ ತಿಳಿಸಿದೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಮಾಹಿತಿ ಸಚಿವಾಲಯ ಅರ್ಜಿಯನ್ನು ರಾಷ್ಟ್ರೀಯ ಇ ಆಡಳಿತ ವಿಭಾಗ ವರ್ಗಾಯಿಸಿದೆ.
ಹೀಗಾಗಿ ಆರೋಗ್ಯ ಸೇತು ಆ್ಯಪ್ ಕುರಿತು ಸಾಕಷ್ಟು ಗೊಂದಲಗಳನ್ನು ಉಂಟು ಮಾಡಿದೆ. ಕೇಂದ್ರ ಸರ್ಕಾರಕ್ಕೆ ಮಾತ್ರವಲ್ಲದೆ, ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ರಾಷ್ಟ್ರೀಯ ಇ-ಆಡಳಿತಕ್ಕೂ ರಾಷ್ಟ್ರೀಯ ಮಾಹಿತಿ ಕೇಂದ್ರ ಶೋಕಾಸ್ ನೋಟಿಸ್ ನೀಡಿದೆ. (ಏಜೆನ್ಸೀಸ್)