ನವದೆಹಲಿ: ಸರ್ಕಾರದ ಹಾಗೂ ತಮ್ಮ ಕನಸಿನ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಾಗ ತಾವು ಉಳಿಸಿದ, ಗಳಿಸಿದ ಹಣವನ್ನು ನೀಡುತ್ತಲೇ ಬಂದಿದ್ದಾರೆ. ಮಾತ್ರವಲ್ಲ, ವಿವಿಧ ದೇಶಗಳ ಅತ್ಯುಚ್ಛ ನಾಗರಿಕ ಪುರಸ್ಕಾರದಿಂದ ಬಂದ ಬಹುಮಾನದ ಹಣವನ್ನು ಜನಕಲ್ಯಾಣಕ್ಕೆ ವಿನಿಯೋಗಿಸಿದ್ದಾರೆ.
ಈವರೆಗೆ ವಿವಿಧ ಯೋಜನೆ ಹಾಗೂ ಜನೋಪಯೋಗಿ ಕಾರ್ಯಗಳಿಗೆ ದೇಣಿಗೆಯಾಗಿ ಮೋದಿ ನೀಡಿದ ಮೊತ್ತ ಕೇಳಿದರೆ ಅಚ್ಚರಿಯಾಗದೇ ಇರದು…!
ತೀರಾ ಇತ್ತೀಚೆಗೆ ಎಂದರೆ ಪ್ರೈಮ್ ಮಿನಿಸ್ಟರ್ಸ್ ಸಿಟಿಜನ್ ಅಸಿಸ್ಟೆನ್ಸ್ ಆ್ಯಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚುವೇಷನ್ಸ್ ( PM-CARES) ನಿಧಿಗೆ ಮೊದಲಿಗರಾಗಿ ತಮ್ಮ ಉಳಿತಾಯದಿಂದ 2.25 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದರು. ಕರೊನಾ ಸಂಕಷ್ಟದಿಂದ ತೊಂದರೆಗೆ ಒಳಗಾದವರಿಗೆ ಸಹಾಯ ನೀಡಲು ಈ ನಿಧಿ ಸ್ಥಾಪಿಸಲಾಗಿತ್ತು.
ಇದನ್ನೂ ಓದಿ; ಕರೊನಾ; ಭಾರತದಲ್ಲಿ ಪ್ರತಿದಿನ ಸೃಷ್ಟಿಯಾಗುತ್ತಿದೆ ಒಂದು ‘ಚೀನಾ’…!
ತಾವೇ ಆರಂಭಿಸಿದ ಯೋಜನೆ ಹಾಗೂ ಕಲ್ಯಾಣ ನಿಧಿಗಳಿಗೂ ಮೋದಿ ದೇಣಿಗೆ ನೀಡಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ ಯೋಜನೆ, ಕ್ಲೀನ್ ಗಂಗಾ ಯೋಜನೆ, ದುರ್ಬಲರ ಕಲ್ಯಾಣಕ್ಕಾಗಿ ಹಣ ವಿನಿಯೋಗಿಸಿದ್ದಾರೆ.
2019ರಲ್ಲಿ ಮೋದಿ ತಮ್ಮ ವೈಯಕ್ತಿಕ ಉಳಿತಾಯದಿಂದ 21 ಲಕ್ಷ ರೂ.ಗಳನ್ನು ಕುಂಭಮೇಳದಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ನೀಡಿದ್ದರು.
ದಕ್ಷಿಣ ಕೊರಿಯಾದಲ್ಲಿ ಕಳೆದ ವರ್ಷ ಪಡೆದ ಸಿಯೋಲ್ ಶಾಂತಿ ಪುರಸ್ಕಾರದ ಸಂಪೂರ್ಣ ಮೊತ್ತ 1.3 ಕೋಟಿ ರೂ.ಗಳನ್ನು ಗಂಗಾ ನದಿಯನ್ನು ಸ್ವಚ್ಛಗೊಳಿಸುವ ನಮಾಮಿ ಗಂಗೆ ಯೋಜನೆಗೆ ನೀಡಿದ್ದರು.
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಾವು ಪಡೆದ ಉಡುಗೊರೆಗಳ ಹರಾಜಿನಿಂದ ಬಂದ 3.40 ಕೋಟಿ ರೂ.ಗಳನ್ನು ಕೂಡ ನಮಾಮಿ ಗಂಗಾ ಯೋಜನೆಗಾಗಿ ಒದಗಿಸಿದ್ದರು. ಇದಲ್ಲದೇ, ಇನ್ನೊಂದಷ್ಟು ಉಡುಗೊರೆಗಳ ಹರಾಜಿನಿಂದ ಬಂದ 8.35 ಕೋಟಿ ರೂ.ಗಳನ್ನು ಕೂಡ ಇದೇ ಯೋಜನೆಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ; ವಾಹನಗಳಿಗೆ ಫಾಸ್ಟ್ಯಾಗ್ ಇಲ್ಲದಿದ್ದರೆ ಥರ್ಡ್ ಪಾರ್ಟಿ ಇನ್ಶುರೆನ್ಸ್ ಸಿಗೋದಿಲ್ಲ…!
ಇದಲ್ಲದೇ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪಡೆದ ಉಡುಗೊರೆಗಳನ್ನು ಹರಾಜು ಮಾಡಿ ಬಂದ 89.96 ಕೋಟಿ ರೂ.ಗಳನ್ನು ಹೆಣ್ಣುಮಕ್ಕಳ ಶಿಕ್ಷಣದ ಕನ್ಯಾ ಕೆಲವಾಣಿ ಯೋಜನೆಗೆಂದು ನೀಡಿದ್ದರು. ಈ ಎಲ್ಲ ಮೊತ್ತಗಳನ್ನು ಪರಿಗಣಿಸಿದರೆ ಪ್ರಧಾನಿ ಮೋದಿ ಒಟ್ಟು 103 ಕೋಟಿ ರೂ.ಗಳನ್ನು ದೇಣಿಗೆ ನೀಡಿದಂತಾಗಲಿದೆ.
ಅಕ್ಟೋಬರ್ ಅಂತ್ಯಕ್ಕೆ ಕರೊನಾ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ; 50 ರಾಜ್ಯಗಳಿಗೆ ಸೂಚನೆ ನೀಡಿದ್ಯಾರು?