ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮುಂಗಾರು ಮಳೆಯ ಅಬ್ಬರ ಭಾರಿ ಜೋರಾಗಿದೆ. ಭಾನುವಾರ ಬೆಳಗ್ಗೆಯಿಂದಲೇ ಭರ್ಜರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಕೆಳಸೇತುವೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ.
ಇಂಥ ಪರಿಸ್ಥಿತಿಯಲ್ಲಿ ಸೆಂಟ್ರಲ್ ದೆಹಲಿಯ ಮಿಂಟೋ ಕೆಳಸೇತುವೆಯಲ್ಲಿ ವ್ಯಕ್ತಿಯೊಬ್ಬರ ಶವ ತೇಲಿದೆ. ಸರಕು ಸಾಗಣೆ ಆಟೋರಿಕ್ಷಾ ಚಾಲಕ ಕುಂದನ್ (60) ಮೃತ. ಈ ಬಗ್ಗೆ ಮಾಹಿತಿ ನೀಡಿರುವ ಬಾರಾಕಂಬಾ ರಸ್ತೆಯ ಎಸಿಪಿ ರಾಜೇಂದ್ರ ದುಬೆ, ಭಾನುವಾರ ಬೆಳಗ್ಗೆ 10 ಗಂಟೆಯಲ್ಲಿ ಶವ ಪತ್ತೆಯಾಯಿತು. ನವದೆಹಲಿ ರೈಲು ನಿಲ್ದಾಣದಿಂದ ಕನಾಟ್ಪ್ಲೇಸ್ಗೆ ಕುಂದನ್ ಸರಕು ಸಾಗಿಸುವಾಗ ಕೆಳಸೇತುವೆಯಲ್ಲಿ ನಿಂತಿರುವ ನೀರನ್ನು ಅಂದಾಜಿಸದೆ ವಾಹನವನ್ನು ಮುನ್ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು ನೀರಿನಲ್ಲಿ ಮುಳುಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ ರೈಲುನಿಲ್ದಾಣದ ಸರಕು ಇಳಿಕೆ ವಿಭಾಗದಲ್ಲಿ ಹಳಿಗಳ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದ ಟ್ರ್ಯಾಕ್ಮನ್ ಶವವನ್ನು ಗಮನಿಸಿದ್ದರು. ತಕ್ಷಣವೇ ಅವರು ನೀರಿಗೆ ಧುಮುಕಿ ಈಜುತ್ತಾ ಹೋಗಿ ಶವವನ್ನು ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದೇ ಕೆಳಸೇತುವೆಯಲ್ಲಿ ದೆಹಲಿ ಸಾರಿಗೆ ನಿಗಮದ ಬಸ್ ನೀರಿನಲ್ಲಿ ಮುಳುಗಿದ್ದು, ಇದರ ಸಮೀಪದಲ್ಲೇ ಕುಂದನ್ ಶವ ಕೂಡ ಪತ್ತೆಯಾಗಿದ್ದಾಗಿ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಸೊಳ್ಳೆಗಳಿಂದ ಹರಡುವುದಿಲ್ಲ ಕರೊನಾ, ಇದು ನಿಜಾನಾ?
3 ಜನರ ರಕ್ಷಣೆ: ಮಿಂಟೋ ಕೆಳಸೇತುವೆಯಲ್ಲಿ ಬೆಳಗ್ಗೆಯಿಂದಲೇ ನೀರು ತುಂಬಿಕೊಂಡಿತ್ತು. ಇದರಲ್ಲಿ ಸಿಲುಕಿದ್ದ ದೆಹಲಿ ಸಾರಿಗೆ ನಿಗಮದ ಬಸ್ನಲ್ಲಿದ್ದ ಚಾಲಕ, ನಿರ್ವಾಹಕ ಮತ್ತು ನೀರಿನಲ್ಲಿ ಸಿಲುಕಿಕೊಂಡಿದ್ದ ಆಟೋರಿಕ್ಷಾದ ಚಾಲಕ ಸೇರಿ ಮೂರು ಜನರನ್ನು ಹೊರಕರೆತರುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಅಗ್ನಿಶಾಮಕದಳ ಸೇವೆಗಳ ನಿರ್ದೇಶಕ ಅತುಲ್ ಗರ್ಗ್, ಭಾನುವಾರ ಬೆಳಗ್ಗೆ 7.45ರಲ್ಲಿ ಡಿಟಿಸಿ ಬಸ್ ಸಿಲುಕಿಕೊಂಡಿರುವ ಮಾಹಿತಿ ಲಭಿಸಿತ್ತು. ತಕ್ಷಣವೇ ಸ್ಥಳಕ್ಕೆ ತೆರಳಿದ ನಮ್ಮ ಸಿಬ್ಬಂದಿ ಬಸ್ನ ಚಾಲಕ ಮತ್ತು ನಿರ್ವಾಹಕ ಅಲ್ಲದೆ, ಒಬ್ಬ ಆಟೋರಿಕ್ಷಾ ಚಾಲಕನನ್ನು ರಕ್ಷಿಸಿದರು. ಬಸ್ನಲ್ಲಿ ಪ್ರಯಾಣಿಕರು ಯಾರೂ ಇರಲಿಲ್ಲ ಎಂದು ತಿಳಿಸಿದ್ದಾರೆ.
ಷಾ ಆಪ್ತನೆಂದು ಹೇಳಿಕೊಂಡು ಗಡ್ಕರಿ ಕಚೇರಿಗೆ ಹೋಯಿತೊಂದು ಫೋನ್ ಕಾಲ್: ಮುಂದೇನಾಯ್ತು?