ನವದೆಹಲಿ: ಕೋವಿಡ್ 19 ನಿಂದಾಗಿ ಈ ವರ್ಷ ಅತ್ಯಂತ ಸೀಮಿತ ಮಟ್ಟದಲ್ಲಿ ಹಜ್ ಯಾತ್ರೆ ನಡೆಸಲು ಸೌದಿ ಅರೆಬಿಯಾ ನಿರ್ಧರಿಸಿದ ಹಿನ್ನೆಲೆಯಲ್ಲಿ, ಈ ವರ್ಷ ಹಜ್ಗೆ ಯಾತ್ರಾರ್ಥಿಗಳನ್ನು ಕಳುಹಿಸದಿರುವ ಕುರಿತು ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದ್ದು. ಭಾರತೀಯ ಯಾತ್ರಾರ್ಥಿಗಳ ಅರ್ಜಿ ಹಣವನ್ನು ನೇರ ವರ್ಗಾವಣೆಯ ಮೂಲಕ ಸಂಪೂರ್ಣ ಹಿಂದಿರುಗಿಸುವುದಾಗಿ ತಿಳಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕೋವಿಡ್ -19 ರೋಗದಿಂದಾಗಿ ಈ ವರ್ಷ ಯಾತ್ರಾರ್ಥಿಗಳನ್ನು ಕಳುಹಿಸದಂತೆ ಸೌದಿ ಅರೇಬಿಯಾ ಕೋರಿದ ಹಿನ್ನೆಲೆಯಲ್ಲಿ ಹಜ್ಗೆ ಯಾತ್ರಾರ್ಥಿಗಳನ್ನು ಕಳುಹಿಸದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ಗಲ್ವಾನ್ ಕಣಿವೆ ಸಂಘರ್ಷ: ಅಮೆರಿಕ ಗುಪ್ತಚರ ವರದಿ ಬಿಚ್ಚಿಟ್ಟ ರಹಸ್ಯವೇನು?
ರದ್ದತಿ ಕಡಿತವಿಲ್ಲದೆ 2.3 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಅರ್ಜಿ ಹಣವನ್ನು ನೇರ ವರ್ಗಾವಣೆಯ ಮೂಲಕ ಹಿಂದಿರುಗಿಸಲಾಗುವುದು ಎಂದು ಅವರು ದೃಢಪಡಿಸಿದರು. ಈ ವರ್ಷ ಬಹಳ ಸೀಮಿತ ಮಟ್ಟದಲ್ಲಿ ಹಜ್ ಯಾತ್ರೆ ನಡೆಸುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ, ಜುಲೈ ಅಂತ್ಯದಲ್ಲಿ ಪ್ರಾರಂಭವಾಗುವ ತೀರ್ಥಯಾತ್ರೆಯಲ್ಲಿ ಭಾಗವಹಿಸಲು ರಾಜಧಾನಿ ವ್ಯಾಪ್ತಿಯಲ್ಲಿರುವ ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮೆಕ್ಕಾಗೆ ಪ್ರತಿವರ್ಷ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರು ಹಜ್ ಯಾತ್ರೆ ಕೈಗೊಳ್ಳುತ್ತಾರೆ. ಇದರಲ್ಲಿ ಹೆಚ್ಚಿನ ಜನರು ವಿದೇಶದಿಂದ ಬರುತ್ತಿದ್ದಾರೆ. ಈಗಾಗಲೇ ಕೋವಿಡ್-19 ನಿಂದಾಗಿ ಉಮ್ರಾ ಯಾತ್ರೆಯನ್ನು ಫೆಬ್ರವರಿಯಿಂದ ಸ್ಥಗಿತಗೊಳಿಸಲಾಗಿದ್ದು, ಈಗ ಹಜ್ ಯಾತ್ರೆಗೆ ಮಿತಿ ಹೇರುವುದರಿಂದ ಸೌದಿಗೆ ಭಾರೀ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.