ಬೀಳಗಿ: ಲಾಕ್ಡೌನದಿಂದ ಬೆಳೆಹಾನಿ, ಕೂಲಿಕಾರ್ಮಿಕರ, ಕ್ಷೌರಿಕರ, ನೇಕಾರರ, ಮಡಿವಾಳರ, ಹೂ ಬೆಳೆಗಾರರ, ಅಟೋರೀಕ್ಷಾ ಚಾಲಕರ ಹಾಗೂ ಟ್ಯಾಕ್ಷಿ ಚಾಲಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪನವರು 1610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಪರಿಹಾರ ವಿತರಣೆಗೆ ಮುಂದಾಗಿರುವುದು ಎಲ್ಲರಿಗೂ ಸಂತಸ ತಂದಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಅವರು ಮಾತನಾಡಿ, ಕರೊನಾ ಹೆಮ್ಮಾರಿಯಿಂದ ವಿಶ್ವವೇ ತಲ್ಲಣಗೊಂಡಿದೆ. ಪ್ರಧಾನಿ ಮೋದಿ ದೇಶದ ಜನರ ಸುರಕ್ಷತೆ ಲಾಕ್ಡೌನ್ ಮಾಡಿದ್ದರಿಂದ ಕರೊನಾ ವಿರುದ್ಧ ಹೋರಾಡಲು ಸಾಧ್ಯವಾಗಿದೆ. ಲಾಕ್ಡೌನ್ ನಿಯಮ ಪಾಲಿಸಿದ್ದರಿಂದ ನಾವು ಇತರ ದೇಶಗಳಿಗಿಂತ ಆರೋಗ್ಯದಿಂದಿರಲು ಸಾಧ್ಯವಾಗಿದೆ ಎಂದರು.
ಕರೊನಾದಿಂದ ಮುಕ್ತಿ ಪಡೆಯಲು ನಾವೆಲ್ಲರೂ ಜಾಗೃತರಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸುವುದು ಉತ್ತಮ. ಕರೊನಾ ತೊಲಗಿ ದೇಶ ರಕ್ಷಣೆಗೆ ನಾವು ಮುಂದಾಗಬೇಕಿದೆ ಎಂದರು.