ಹಿರಿಯೂರು: ಮಧ್ಯಪ್ರದೇಶ ರಾಜ್ಯದ ದೇವೋಸ್ ಜಿಲ್ಲೆಯ ನವೋದಯ ಶಾಲೆಯಲ್ಲಿ ಸಿಲುಕಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಮಕ್ಕಳನ್ನು ಹಿಂದಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಪಾಲಕರು ಮಂಗಳವಾರ ಉಡುವಳ್ಳಿ ನವೋದಯ ಶಾಲೆ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.
ಉಡುವಳ್ಳಿ ನವೋದಯ ಶಾಲೆಯ 12 ಬಾಲಕಿಯರು ಮತ್ತು 11 ಬಾಲಕರನ್ನು ಸಾಂಸ್ಕೃತಿಕ ಹಾಗೂ ಭಾಷಾ ಕಲಿಕೆಗೆ ಒಂದು ವರ್ಷದ ಅವಧಿಗಾಗಿ ಕಳುಹಿಸಲಾಗಿದೆ. ಈಗ ಅಲ್ಲಿನ ಶೈಕ್ಷಣಿಕ ಕಲಿಕಾ ಅವಧಿ ಕೂಡ ಮುಗಿದಿದೆ. ಮಾತೃಶಾಲೆಗೆ ಹಿಂತಿರುಗುವ ವೇಳೆ ದೇಶಾದ್ಯಂತ ಲಾಕ್ಡೌನ್ ಮಾಡಿದ್ದರಿಂದ ಜಿಲ್ಲೆಗೆ ಬರಲಾಗುತ್ತಿಲ್ಲ. ಅಲ್ಲದೆ ದೇವೋಸ್ ನಗರದಲ್ಲಿ ಕೋವಿಡ್-19 ಸೋಂಕು ಹೆಚ್ಚಿರುವ ಕಾರಣ ಮಕ್ಕಳು ಊಟ, ನಿದ್ರೆ ಮಾಡದೆ ತೀವ್ರ ಕಳವಳಕ್ಕೀಡಾಗಿದ್ದಾರೆ. ಕೂಡಲೇ ಅವರನ್ನು ಕರೆತರುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಪಾಲಕರಾದ ರಮೇಶ್ ಬಾಬು, ಜಯಣ್ಣ, ಓಬಯ್ಯ, ಪಾಲಯ್ಯ, ಚಂದ್ರಶೇಖರ್, ಮಲ್ಲಪ್ಪ, ತಿಪ್ಪೇಸ್ವಾಮಿ, ರಾಜಣ್ಣ, ಚಂದ್ರಪ್ಪ, ತಿರುಮಲನಾಯಕ ಇತರರಿದ್ದರು.