ಪಟಿಯಾಲಾ: ಸಿಖ್ಖರ ನಿಹಾಂಗ್ ಪಂಗಡದ ಅನುಯಾಯಿಗಳ ಮಾರಣಾಂತಿಕ ಹಲ್ಲೆಯಿಂದ ತುಂಡಾಗಿದ್ದ ಎಎಸ್ಐ ಕೈಯನ್ನು ವೈದ್ಯರು ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ.
ಚಂಡಿಗಢ್ನ ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಯ (ಪಿಜಿಐ) ವೈದ್ಯರು ಸತತ ಏಳೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ತುಂಡಾಗಿದ್ದ ಎಡಗೈಯನ್ನು ಮರುಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತರಕಾರಿ ಮಾರುಕಟ್ಟೆಯಲ್ಲಿ ಕರ್ತವ್ಯದಲ್ಲಿದ್ದ 50 ವರ್ಷದ ಎಎಸ್ಐ ಹರ್ಜಿತ್ ಸಿಂಗ್ ಮೇಲೆ ದಾಳಿ ನಡೆಸಿದ್ದ ನಿಹಾಂಗ್ಗಳು ಅವರ ಎಡಗೈಯನ್ನು ಕತ್ತರಿಸಿ ಹಾಕಿದ್ದರು.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದೇನೆ. ಕೈಯನ್ನು ಯಶಸ್ವಿಯಾಗಿ ಮರುಜೋಡಿಸಲಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ, ಹರ್ಜಿತ್ ಸಿಂಗ್ ಜತೆಗೂ ಮಾತನಾಡಿದ್ದು, ಅವರು ಕೂಡ ಲವಲವಿಕೆಯಿಂದ ಇದ್ದಾರೆ. ಅವರು ಇನ್ನೂ ಐದು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದಾರೆ.
ಘಟನೆ ಹಿನ್ನೆಲೆ: ಭಾನುವಾರ ಬೆಳಗ್ಗೆ ಪಟಿಯಾಲಾದ ತರಕಾರಿ ಮಾರುಕಟ್ಟೆಯಲ್ಲಿ ಹರ್ಜಿತ್ ಸಿಂಗ್ ಹಾಗೂ ಮಾರುಕಟ್ಟೆ ಸಿಬ್ಬಂದಿ ಜತೆ ಕರ್ತವ್ಯದಲ್ಲಿದ್ದರು. ಅಲ್ಲಿಗೆ ಬಂದ ನಿಹಾಂಗ್ಗಳ ಗುಂಪನ್ನು ತಡೆದ ಸಿಬ್ಬಂದಿಯೊಬ್ಬ ಪಾಸ್ ನೀಡುವಂತೆ ಕೇಳಿದ್ದಾರೆ. ಪಂಜಾಬ್ನಲ್ಲಿ ಕರೊನಾ ಹಿನ್ನೆಲೆ ಕಫ್ಯೂ ವಿಧಿಸಲಾಗಿದ್ದು, ಜನರು ಹೊರಗೆ ಬರಲು ಪಾಸ್ ಅಗತ್ಯವಾಗಿದೆ. ಆದರೆ, ಪಾಸ್ ಹೊಂದಿಲ್ಲದ ಗುಂಪಿಗೆ ಪ್ರವೇಶ ನಿರಾಕರಿಸಿದಾಗ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮಾರುಕಟ್ಟೆಗೆ ನುಗ್ಗಿದ್ದಾರೆ. ಅವರನ್ನು ತಡೆದ ಹರ್ಜಿತ್ ಸಿಂಗ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಗುಂಪು ಅವರ ಎಡಗೈಯನ್ನು ಕತ್ತರಿಸಿತ್ತು. ಬಳಿಕ ಸಮೀಪದ ಹಳ್ಳಿಯ ಗುರುದ್ವಾರದಲ್ಲಿ ಅಡಗಿದ್ದ ಹಲ್ಲೆಕೋರರನ್ನು ಭಾರಿ ಪೊಲೀಸ್ ಪಡೆ ಬಳಸಿ ಬಂಧಿಸಲಾಗಿತ್ತು.