ಭರಮಸಾಗರ: ಕರೊನಾ ಪರಿಸ್ಥಿತಿ ಹತೋಟಿಗಾಗಿ ಗ್ರಾಮಾಡಳಿತ, ಆರೋಗ್ಯ, ಪೊಲೀಸ್ ಇಲಾಖೆ ಬುಧವಾರದಿಂದ ಕಠಿಣ ಕ್ರಮ ಕೈಗೊಂಡಿವೆ.
ಗ್ರಾಪಂ ಆವರಣದಲ್ಲಿ ಮಂಗಳವಾರ ವಿವಿಧ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ನಡಾವಳಿ ಅಂಗೀಕರಿಸಲಾಗಿದೆ.
ಅಗತ್ಯ ವಸ್ತುಗಳ ಪೂರೈಕೆಗೆ ದಿನಸಿ ಅಂಗಡಿಗಳನ್ನು ತೆರೆಯಲು ಬೆಳಗ್ಗೆ 7ರಿಂದ 10 ಹಾಗೂ ಸಂಜೆ 4 ರಿಂದ 7ರ ವರೆಗೆ ಅನುಮತಿ ನೀಡಲಾಗಿದೆ. ಇದನ್ನು ಮೀರಿದ ಅಂಗಡಿಗಳ ಲೈಸೆನ್ಸ್ ರದ್ದು ಪಡಿಸುವ ಕುರಿತು ಎಚ್ಚರಿಕೆ ನೀಡಲಾಗಿದೆ.
ಗ್ರಾಮದಲ್ಲಿ ಎಲ್ಲ ಕಡೆ ಸ್ವಚ್ಛತೆಗೆ ಕ್ರಮ ಕೈಗೊಂಡು ಸೋಂಕು ನಿರೋಧಕ ಔಷಧ ಹಾಗೂ ಬ್ಲೀಚಿಂಗ್ ಪೌಡರನ್ನು ಸಿಂಪಡಿಸುವ ಕಾರ್ಯ ಆರಂಭಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಸೇರಿ ಗ್ರಾಮದ ಎಲ್ಲ ರಸ್ತೆಗಳಲ್ಲಿ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಅನಗತ್ಯವಾಗಿ ಸಂಚರಿಸುತ್ತಿದ್ದವರ ವಿರುದ್ಧ ಕ್ರಮ ವಹಿಸಲಾಗಿದೆ. ಹಾಲು, ನೀರು, ತರಕಾರಿ, ಔಷಧಿ, ದಿನಸಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಮಾತ್ರ ಅನುಮತಿ ನೀಡಿ ಪರಿಶೀಲಿಸಿ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.