ಮೋರಟಗಿ: ಕರೊನಾ ತಡೆಗೆ ಸರ್ಕಾರ ಕಟ್ಟುನಿಟ್ಟಿನ ನಿರ್ಬಂಧ ಹೊರಡಿಸಿರುವುದರಿಂದ ಮೋರಟಗಿ ಗ್ರಾಮದಲ್ಲಿ ಪೊಲೀಸ್, ಆರೋಗ್ಯ, ಕಂದಾಯ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿ ಚೆಕ್ಪೋಸ್ಟ್ ನಿರ್ಮಿಸಿ ವಾಹನಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಮಾ.23 ರಂದು ಆರಂಭವಾಗಿರುವ ಚೆಕ್ಪೋಸ್ಟ್ನಲ್ಲಿ ಸಿಂದಗಿ ಸಿಪಿಐ, ಪಿಎಸ್ಐ, ತಹಸೀಲ್ದಾರ್, ತಾಲೂಕು ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ಕಲಬುರಗಿ ಜಿಲ್ಲೆ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಬರುವ ವಾಹನಗಳನನ್ನು ಪರಿಶೀಲಿಸುತ್ತಿದ್ದಾರೆ.
ಸ್ತಬ್ದವಾಯ್ತು ಘತ್ತರಗಿ ರಸ್ತೆ
ಪ್ರತಿ ಅಮವಾಸ್ಯೆಯಂದು ಸಾವಿರಾರು ಭಕ್ತರು ಘತ್ತರಗಿ ಭಾಗ್ಯವಂತಿ ದರ್ಶನಕ್ಕೆ ಆಗಮಿಸುತ್ತಿದ್ದರು. ಕರ್ಫ್ಯೂ ಹಿನ್ನೆಲೆ ಪೊಲೀಸ್ ಅಧಿಕಾರಿಗಳು ಭಕ್ತರಿಗೆ ಘತ್ತರಗಿಗೆ ಹೋಗಲು ಅನುಮತಿ ನೀಡದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲೇ ಕರ್ಪೂರ ಬೆಳಗಿ ಕಾಯಿ ಒಡೆದು ಭಕ್ತರು ಗ್ರಾಮಗಳಿಗೆ ಮರಳಿದರು.
ಸುಡುಬಿಸಿಲಲ್ಲೂ ಕರ್ತವ್ಯ ಪಾಲನೆ
![](https://cdn.vvimgs.com/wp-content/uploads/2024/06/ABHUDAYA-WEB-01.jpg)
ದೇವರಹಿಪ್ಪರಗಿ ಪಿಎಸ್ಐ ರವಿ ಎಂ.ವೈ., ಎಸ್.ಡಿ. ಬಾವಿಕಟ್ಟಿ, ಪ್ರಕಾಶ ನಾಯಕ, ಎಸ್.ಆರ್. ತಳವಾರ, ಎಚ್.ವೈ. ಆಸಂಗಿ, ಸುರೇಶ ಕೊಂಡಿ, ಆರೋಗ್ಯ ಸಿಬ್ಬಂದಿ ಗುರಲಿಂಗಯ್ಯ ಮಠ, ಬಿ.ಜೆ. ಮುಳಸಾವಳಗಿ, ಾರುಖ್ ವಲ್ಲಿಭಾಯ್, ಈರಣ್ಣ ಪಾಟೀಲ, ಭಾಗೇಶ ಹೊಸಮನಿ ಅವರು ಸುಡುಬಿಸಿಲಲ್ಲೇ ಮಂಗಳವಾರ ಕರ್ತವ್ಯ ಪಾಲನೆ ಮಾಡಿದರು.
ಕದ್ದುಮುಚ್ಚಿ ಕಾಯಿಪಲ್ಲೆ ಮಾರಾಟ
ಪ್ರತಿ ಮಂಗಳವಾರ ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂತೆ ನಡೆಯುತ್ತಿದ್ದು, ಕರೊನಾ ನಿಯಂತ್ರಣಕ್ಕೆ ಗ್ರಾಪಂ ಡಂಗುರ ಸಾರಿ ಸಂತೆ ರದ್ದುಗೊಳಿಸಿತ್ತು. ಆದರೂ ಕೆಲ ಹಳ್ಳಿಗರು ಗೊತ್ತಿಲ್ಲದೆ ಗಂಟುಕಟ್ಟಿಕೊಂಡು ವ್ಯಾಪಾರಕ್ಕೆ ಬಂದಿದ್ದರು. ವ್ಯಾಪಾರ ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಪೊಲೀಸರ ಕಣ್ತಪ್ಪಿಸಿ ಸಂದಿಗಳಲ್ಲಿ ತಾವು ತಂದ ತರಕಾರಿಗಳನ್ನು ರೈತರು ಮಾರಾಟ ಮಾಡಿ ತಮ್ಮೂರಿನತ್ತ ಹೆಜ್ಜೆ ಹಾಕಿದರು.
![ಸುಡುಬಿಸಿಲಲ್ಲೂ ಕರ್ತವ್ಯ ಮೆರೆದ ಅಧಿಕಾರಿಗಳು](https://cdn.vvimgs.com/wp-content/uploads/2020/03/image-112.png)