ಮೇರಠ್ : ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಸೌಹಾರ್ದತೆ ಕಾಪಾಡಬೇಕು ಎನ್ನುವ ದೃಷ್ಟಿಯಲ್ಲಿ ಉತ್ತರ ಪ್ರದೇಶದ ಮೇರಠ್ ನಗರದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳ ಮದುವೆ ಆಮಂತ್ರಣ ಪತ್ರದಲ್ಲಿ ಹಿಂದೂ ದೇವರುಗಳ ಫೋಟೋ ಮುದ್ರಣ ಮಾಡಿಸಿದ್ದಾನೆ.
ಮೇರಠ್ ಬಳಿ ಇರುವ ಹಸ್ತಿನಾಪುರದ ನಿವಾಸಿ ಮೊಹಮ್ಮದ್ ಸರಾಫತ್ ಅವರ ಮಗಳು ಅಸ್ಮಾಗೆ ಮಾರ್ಚ್ 4ರಂದು ಮದುವೆ ನಿಶ್ಚಯವಾಗಿದೆ. ಮಗಳ ಮದುವೆಗೆ ಬಂಧುಗಳ ಜತೆ ಮುಸ್ಲಿಂ ಮತ್ತು ಹಿಂದೂ ಸ್ನೇಹಿತರನ್ನು ಆಮಂತ್ರಿಸುತ್ತಿರುವ ಸರಾಫತ್ ಸೌಹಾರ್ದತೆಯನ್ನು ಸಾರುವಂತಹ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾನೆ. ಆಮಂತ್ರಣ ಪತ್ರದ ಮುಖಪುಟದಲ್ಲಿ ಗಣಪತಿಯ ಫೋಟೋ ಮತ್ತು ರಾಧಾಕೃಷ್ಣರ ಫೋಟೋವನ್ನು ಮುದ್ರಿಸಲಾಗಿದೆ. ಜತೆಗೆ ಮುಸ್ಲಿಂ ಸಮುದಾಯದ ಚಿಹ್ನೆಯಾಗಿರುವ ಅರ್ಧ ಚಂದ್ರ ಮತ್ತು ನಕ್ಷತ್ರದ ಮುದ್ರಣವನ್ನೂ ಸಹ ಮಾಡಲಾಗಿದೆ.
ಕೋಮು ದ್ವೇಷ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸೌಹಾರ್ದತೆಯನ್ನು ಪ್ರದರ್ಶಿಸುವುದು ಒಳ್ಳೆಯದು ಎಂದು ನನಗನಿಸಿತು. ನನ್ನ ಈ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ದೊರಕಿದೆ ಎಂದು ಸರಫತ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಈ ವಿಶೇಷ ಆಮಂತ್ರಣವನ್ನು ಹಿಂದಿಯಲ್ಲಿ ಮುದ್ರಣ ಮಾಡಿಸಿರುವ ಸರಫತ್, ಹಿಂದಿ ಭಾಷೆ ಬಾರದ ತನ್ನ ಬಂಧುಗಳು ಮತ್ತು ಮುಸ್ಲಿಂ ಸ್ನೇಹಿತರಿಗಾಗಿ ಉರ್ದು ಭಾಷೆಯಲ್ಲಿ ಮತ್ತೊಂದು ಆಮಂತ್ರಣ ಪತ್ರಿಕೆ ಮಾಡಿಸಿದ್ದಾನೆ ಎನ್ನಲಾಗಿದೆ. (ಏಜೆನ್ಸೀಸ್)