ಬೆಂಗಳೂರು: ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯನ್ನು ಒಂದನೇ ಎಸಿಎಂಎಂ ಕೋರ್ಟ್ ಮಾ.7ರವರೆಗೆ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಆಫ್ರಿಕಾದ ಸೆನೆಗಲ್ನಲ್ಲಿ ಬಂಧಿತನಾಗಿದ್ದ ಪಾತಕಿ ರವಿ ಪೂಜಾರಿಯನ್ನು ಭಾನುವಾರ ರಾತ್ರಿ ನಗರಕ್ಕೆ ಕರೆದುಕೊಂಡು ಸೋಮವಾರ ಮಧ್ಯಾಹ್ನ ಕೋರ್ಟ್ ಮುಂದೆ ಸಿಸಿಬಿ ಪೊಲೀಸರು ಹಾಜರುಪಡಿಸಿದರು.
ರವಿಪೂಜಾರಿ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಆತನನ್ನು 15 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಬೇಕು ಎಂದು ಸಿಸಿಬಿ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರವಿ ಪೂಜಾರಿ ಪರ ವಕೀಲರು ಆರೋಪಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು ಚಿಕಿತ್ಸೆ ಅಗತ್ಯ ಇರುವುದರಿಂದ ಪೊಲೀಸರ ವಶಕ್ಕೆ ನೀಡಬಾರದು ಎಂದು ಹೇಳಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಜಗದೀಶ್ ಅವರು ಆರೋಪಿಯನ್ನು ಮಾ.7ರವರೆಗೆ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದರು.
ವಿಚಾರಣೆ ವೇಳೆ ರವಿ ಪೂಜಾರಿ ತಲೆಗೆ ಹಾಕಿದ್ದ ಟೋಪಿ ತೆಗೆದು ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ್ದಾನೆ. ಕನ್ನಡ ಬರುತ್ತಾ ಎಂದು ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಆತ ಕನ್ನಡ ಅರ್ಥವಾಗುತ್ತದೆ. ಮಾತನಾಡಲು ಕಷ್ಟ ಎಂದು ತಿಳಿಸಿದ. (ದಿಗ್ವಿಜಯ ನ್ಯೂಸ್)