ಮುದಗಲ್: ಸಮೀಪದ ಖೈರವಾಡಗಿ ಹತ್ತಿರ ಗುಂಡಸಾಗರ-ಖೈರವಾಡಗಿ ಮುಖ್ಯರಸ್ತೆ ಬದಿಯ ಸೇತುವೆಗೆ ಸೋಮವಾರ ಕಾರ್ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಇಬ್ಬರು ಶಿಕ್ಷಕರು ಸಾವಿಗೀಡಾಗಿದ್ದಾರೆ.
ಲಿಂಗಸುಗೂರಿಂದ ಸಜ್ಜಲಗುಡ್ಡದ ಸರ್ಕಾರಿ ಪ್ರೌಢ ಶಾಲೆಗೆ ಕಾರ್ನಲ್ಲಿ ಹೊರಟಿದ್ದ ಮೂವರು ಶಿಕ್ಷಕರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸೇತುವೆ ಗೋಡೆಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಬಿರಗಾಯಗೊಂಡಿದ್ದ ಸುರಪುರ ತಾಲೂಕಿನ ವಾಗಣಗೇರಿಯ ಶಿಕ್ಷಕ ಚಂದಾಲಿಂಗ (26) ಮತ್ತು ಮುದ್ದೆಬಿಹಾಳ ತಾಲೂಕಿನ ಬೂದಿಹಾಳದ ರವಿಕುಮಾರ ಕುಲ್ಕರ್ಣಿ(40) ಎನ್ನುವವರು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಇನ್ನೂ ಗಂಭೀರವಾಗಿ ಗಾಯಗೊಂಡಿರುವ ಇನ್ನೊಬ್ಬ ಶಿಕ್ಷಕ ಶಿವರುದ್ರಯ ಎನ್ನುವವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.