ಮಂಡ್ಯ: ದೇವರಿಗೆ ಮೊದಲು ಪೂಜೆ ಸಲ್ಲಿಸುವ ವಿಚಾರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಜಗಳವಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಬಿಲ್ಲೇನಹಳ್ಳಿಯ ಗವಿರಂಗನಾಥಸ್ವಾಮಿ ದೇವಸ್ಥಾನದಲ್ಲಿ ಗಲಾಟೆ ನಡೆದಿದೆ.
ಶುಕ್ರವಾರ ನಡೆದ ಗವಿರಂಗನಾಥಸ್ವಾಮಿಯ ರಥೋತ್ಸವ ಚಾಲನೆ ವೇಳೆ ತಾವೇ ಮೊದಲು ಪೂಜೆ ಸಲ್ಲಿಸುವುದಾಗಿ ಬಿಜೆಪಿ ಶಾಸಕ ನಾರಾಯಣಗೌಡ, ಬೆಂಬಲಿಗರು ಹಾಗೂ ಜೆಡಿಎಸ್ ತಾಲೂಕು ಪಂಚಾಯಿತಿ ಸದಸ್ಯ ರಾಜಹುಲಿ ದಿನೇಶ್ ಹಾಗೂ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.
ಮೊದಲು ನಾನು ಪೂಜೆ ಮಾಡಬೇಕು ಎಂದು ರಾಜಹುಲಿ ದಿನೇಶ್, ಇಲ್ಲ ಈ ಕ್ಷೇತ್ರದ ಶಾಸಕ ನಾನು, ನಾನೇ ಮೊದಲು ಪೂಜೆ ಮಾಡಬೇಕು ಎಂದು ನಾರಾಯಣಗೌಡ ವಾಗ್ವಾದ ಮಾಡಿದ್ದಾರೆ.
ಮೊದಲ ಪೂಜೆ ಸಲ್ಲಿಸುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ನಂತರ ಮಧ್ಯ ಪ್ರವೇಶ ಮಾಡಿದ ಪೊಲೀಸರು, ರಾಜಹುಲಿ ದಿನೇಶ್ರನ್ನು ಕರೆದುಕೊಂಡ ಹೋಗಿದ್ದಾರೆ.
ಜಗಳ ನಿಂತ ಬಳಿಕ ಶಾಸಕ ನಾರಾಯಣಗೌಡ ಮೊದಲ ಪೂಜೆ ಸಲ್ಲಿಸಿದರು. ನಂತರ ಗವಿರಂಗನಾಥಸ್ವಾಮಿಯ ರಥೋತ್ಸವ ಆರಂಭವಾಯಿತು.