ತುಮಕೂರು: ಆಂಧ್ರದ ನಕ್ಸಲ್ ಹಿತೈಷಿ, ಕ್ರಾಂತಿಕಾರಿ ಕವಿ ಗದ್ದರ್ ಸೋಮವಾರ ತುಮಕೂರಿನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಪಾವಗಡ ತಾಲೂಕಿನ ವೆಂಕಟಾಪುರದಲ್ಲಿ 2005ರ ಫೆಬ್ರವರಿ 11ರ ನಕ್ಸಲ್ ಹತ್ಯಾಕಾಂಡದಲ್ಲಿ 7 ಪೊಲೀಸರು ಮತ್ತು ಒಬ್ಬ ನಾಗರಿಕ ಮೃತಪಟ್ಟಿದ್ದ ಪ್ರಕರಣದಲ್ಲಿ ಗದ್ದರ್ ಕೂಡ ಆರೋಪಿ. ಹೀಗಾಗಿ ಸೋಮವಾರ ಸಂಜೆ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರಾದ ಗದ್ದರ್ ಅವರ ಜಾಮೀನು ಸಂಬಂಧಿಸಿ ಕೆ.ಎ.ರಾಮಕೃಷ್ಣಯ್ಯ ಮತ್ತು ವಲಸಪ್ಪ ಎಂಬುವರು ಪಹಣಿ ನೀಡಿ ಜಾಮೀನಿಗೆ ಸಹಿ ಹಾಕಿದ್ದಾರೆ.
ವೆಂಕಟಾಪುರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈಗಾಗಲೇ ಜಾಮೀನು ಮಂಜೂರು ಮಾಡಿದ್ದು ನ.7, 2019ರಂದು ಪಾವಗಡ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಪ್ರತಿಯನ್ನು ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆಯನ್ನು ಮಧುಗಿರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ನ್ಯಾಯಾಧೀಶರು ರಜೆ ಇದ್ದ ಕಾರಣ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ಗದ್ದರ್ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದರು. ಗದ್ದರ್ ಪರ ವಕೀಲರಾದ ಪಾವಗಡ ಶ್ರೀರಾಮ್, ರಂಗನಾಥ್ ಯಾದವ್ ಮತ್ತು ಹನುಮಂತರಾಜು ವಕಾಲತ್ತು ಸಲ್ಲಿಸಿದ್ದು. ಕೋರ್ಟ್ ವಿಚಾರಣೆಯನ್ನು ಜ.20ಕ್ಕೆ ಮುಂದೂಡಿದೆ.
ಇದು ಪ್ರಕರಣ: ಚಿಕ್ಕಮಗಳೂರಿನ ನಕ್ಸಲ್ ನಾಯಕ ಸಾಕೇತ್ ರಾಜನ್ನನ್ನು ಪೊಲೀಸ್ ಎನ್ಕೌಂಟರ್ನಲ್ಲಿ ಹತ್ಯೆ ವಾಡಲಾಗಿತ್ತು. ಇದಕ್ಕೆ ಪ್ರತಿರೋಧವಾಗಿ ಪಾವಗಡ ತಾಲೂಕಿನ ವೆಂಕಟಾಪುರ ಸರ್ಕಾರಿ ಶಾಲೆಯಲ್ಲಿ ಬೀಡು ಬಿಟ್ಟಿದ್ದ ಕೆಎಸ್ಆರ್ಪಿ ತುಕಡಿ ಮೇಲೆ 2015ರ ಫೆಬ್ರವರಿ 11ರ ರಾತ್ರಿ ನಕ್ಸಲರು ಗ್ರೇನೆಡ್ ಮತ್ತು ಬಾಂಬ್ಗಳಿಂದ ದಾಳಿ ನಡೆಸಿದ್ದರು. ಈ ಪ್ರಕರಣದಲ್ಲಿ ಗದ್ದರ್ 11ನೇ ಆರೋಪಿ.