ಹಿರಿಯೂರು: ಶೋಷಣೆ-ಹಸಿವು ಮುಕ್ತ ಸಮಾಜ ನಿರ್ಮಾಣಕ್ಕೆ ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಜಿಪಂ ಸದಸ್ಯ ಆರ್.ನಾಗೇಂದ್ರ ನಾಯ್ಕ ಹೇಳಿದರು.
ಶಿಕ್ಷಣ ಇಲಾಖೆ ಹಾಗೂ ಅಕ್ಷರ ಫೌಂಡೇಷನ್ ಸಹಯೋಗದಲ್ಲಿ ಆದಿವಾಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಗಣಿತ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಭಾಗವಹಿಸುವುದರಿಂದ ಜ್ಞಾನದ ವಿಕಾಸದ ಜತೆ ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್ ಮಾತನಾಡಿ, ಪಾಲಕರು ಮಕ್ಕಳನ್ನು ಕೇವಲ ಪುಸ್ತಕದ ಹುಳುವಾಗಿಸದೇ ಪ್ರತಿಭಾವಂತರನ್ನಾಗಿ ರೂಪಿಸಿ, ಸೃಜನಾತ್ಮಕ ಮನೋಭಾವ ಬೆಳೆಸಬೇಕು ಎಂದರು.
ಬಿಇಒ ರಾಮಯ್ಯ, ಅಕ್ಷರ ದಾಸೋಹ ತಾಲೂಕು ಅಧಿಕಾರಿ ನಾಗರಾಜಾಚಾರ್, ಗ್ರಾಪಂ ಅಧ್ಯಕ್ಷೆ ಉಮಾದೇವಿ, ಸದಸ್ಯರಾದ ಕನಕರಾಜ್, ನಾಗರತ್ನಮ್ಮ, ಪುಟ್ಟಮ್ಮ, ಇಸಿಒ ಶಶಿಧರ್ ಇತರರಿದ್ದರು.