ಸಾಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಹಾಗೂ ಬಿ.ವೈ.ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮತ ನೀಡಬೇಕು. ಕೇಂದ್ರದ ಯೋಜನೆಗಳನ್ನು ಅತ್ಯಂತ ಸಮರ್ಥವಾಗಿ ಫಲಾನುಭವಿಗಳಿಗೆ ತಲುಪಿಸುವಲ್ಲಿ ರಾಘವೇಂದ್ರ ಅವರ ಕೆಲಸ ಮಾದರಿಯಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದ ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಕ್ಷೇತ್ರದಾದ್ಯಂತ ಎರಡು ಬಾರಿ ಮನೆಮನೆಗೆ ಭೇಟಿ ನೀಡಿ ಮತದಾರರ ಮನಗೆಲ್ಲುವ ಕೆಲಸ ಮಾಡಲಾಗಿದೆ. ಅಂತಿಮ ಹಂತದ ಪ್ರಚಾರ ಕಾರ್ಯವನ್ನೂ ಕೈಗೊಳ್ಳಲಾಗಿದೆ ಎಂದರು.
ಶಿವಮೊಗ್ಗ ಕ್ಷೇತ್ರದ ನಮ್ಮ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಲಕ್ಷಾಂತರ ಮತಗಳ ಅಂತರದಿಂದ ಜಯಗಳಿಸುವ ವಿಶ್ವಾಸವಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪ್ರಭಾರಿಯಾಗಿ ನಾನು ಕೆಲಸ ಮಾಡಿದ್ದು, ಅಲ್ಲಿಯೂ ವಿಶ್ವೇಶ್ವರ ಹೆಗಡೆ ಕಾಗೇರಿ ಬರ ಜನರ ಒಲವಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ದೊರೆಯುತ್ತಿದೆ. 400ಕ್ಕೂ ಅಧಿಕ ಸ್ಥಾನ ಗಳಿಸುವ ಗುರಿ ತಲುಪಲಿದ್ದೇವೆ. ನಮ್ಮ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ನಿಖರವಾಗಿ ಹೇಳುತ್ತೇವೆ. ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು ಎಂದು ಅವರು ದೇಶದ ಜನರಿಗೆ ತಿಳಿಸಬೇಕು. ಬಿ.ವೈ.ರಾಘವೇಂದ್ರ ಸರಳವಾಗಿ ಎಲ್ಲರ ಕಷ್ಟಗಳನ್ನು ಕೇಳುವ ವ್ಯಕ್ತಿತ್ವ ಹೊಂದಿದ್ದಾರೆ. ಅಂಥವರನ್ನು ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಮಾಡುವಾಗ ಅರಣ್ಯ ಹಕ್ಕು ಕಾಯ್ದೆ, ಶರಾವತಿ ಮುಳುಗಡೆ ಸಂತ್ರಸ್ತರ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಿದ್ದೇವೆ. ಜತೆಗೆ ಜ.26ರೊಳಗೆ ಶತಾಬ್ದಿ ರೈಲು ಸಾಗರಕ್ಕೆ ತರುವ ಭರವಸೆ ನೀಡಿದ್ದೇವೆ. ಈ ಬಗ್ಗೆ ಸಂಸದ ರಾಘವೇಂದ್ರ ಅವರಿಗೆ ಸಹ ಮನವಿ ಮಾಡಲಾಗಿದೆ. ಅಲ್ಲದೇ ತಾಳಗುಪ್ಪ ರೈಲ್ವೆ ಮಾರ್ಗವನ್ನು ಸಿದ್ದಾಪುರ-ಶಿರಸಿ ಮೂಲಕ ಹುಬ್ಬಳ್ಳಿ ಸೇರಿಸುವ, ಸುರಂಗ ನಿರ್ಮಿಸಿ ಹೊನ್ನಾವರಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶವಿದೆ ಎಂದರು.
ಮುಖಂಡರಾದ ಕೆ.ಆರ್.ಗಣೇಶಪ್ರಸಾದ್, ವಿ.ಮಹೇಶ್, ಹು.ಭಾ.ಅಶೋಕ್, ಗಿರೀಶ್ ಗೌಡ, ಜಿ.ಕೆ.ಭೈರಪ್ಪ ಇತರರಿದ್ದರು.