ದಕ್ಷಿಣ ಕನ್ನಡ: ದೇಶದಲ್ಲಿ ಸಾರ್ವತ್ರಿಕ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಭದ್ರಕೋಟೆ ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡದಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಅಭ್ಯರ್ಥಿಗಳ ಪರ ಮತಯಾಚಿಸಿದ್ದಾರೆ.
ಮೈಸೂರಿನಲ್ಲಿ ಸಮಾವೇಶ ಮುಗಿಸಿ ಮಂಗಳೂರಿಗ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಜನತೆ ಹಾಗೂ ಬಿಜೆಪಿ ನಾಯಕರು ಅದ್ದೂರಿ ಸ್ವಾಗತವನ್ನು ನೀಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಾರಾಯಣ ಗುರು ಸರ್ಕಲ್ನಿಂದ ನವಭಾರತ್ ಸರ್ಕಲ್ವರೆಗೆ ರೋಡ್ ಶೋ ನಡೆಯಿತು.
ಇದನ್ನೂ ಓದಿ: ಸಿಎಂ ತವರಿನಲ್ಲಿ ಅಬ್ಬರಿಸಿದ ಪ್ರಧಾನಿ; ನಾನು ಇರೋವರೆಗೂ ಇದು ಅಸಾಧ್ಯ ಎಂದ ಮೋದಿ
ಪ್ರಧಾನಿ ಮೋದಿ ಅವರನ್ನು ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರು. ಈ ವೇಳೆ ಮೋದಿ ಮೋದಿ ಎಂದು ಜಯಘೋಷ ಕೂಗಿದ ಜನರು ಪ್ರಧಾನಿ ಅವರ ಮೇಲೆ ಹೂ ಮಳೆ ಸುರಿಸುವ ಮೂಲಕ ನೆಚ್ಚಿನ ನಾಯಕನನ್ನು ನೋಡಿ ಖುಷಿಪಟ್ಟರು. ಸುಮಾರು ಎರಡು ಕಿಲೋಮೀಟರ್ ನಡೆದ ರೋಡ್ ಶೋ ಮಾರ್ಗವೇ ಕೇಸರಿ ಮಯವಾಗಿತ್ತು.
ನಾರಾಯಣ ಗುರು ಸರ್ಕಲ್ನಿಂದ ಲಾಲ್ಬಾಗ್ನ ಮಂಗಳೂರು ಪಾಲಿಕೆ ಕಚೇರಿ, ಬಳ್ಳಾಲ್ಬಾಗ್ ದಾಟಿ ಎಂ.ಜಿ. ರಸ್ತೆ ಮೂಲಕ ಸಾಗಿ ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ನವಭಾರತ್ ಸರ್ಕಲ್ವರೆಗೆ ರೋಡ್ ಶೋ ನಡೆಯಿತು. ಪ್ರಧಾನಿ ಮೋದಿಗೆ ದಕ್ಷಿಣ ಕನ್ನಡದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟಾ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಸಾಥ್ ನೀಡಿದರು.