ಮಂಗಳೂರು: ಉರ್ವಸ್ಟೋರ್ನ ಅಂಗಡಿಗುಡ್ಡೆ ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನೂತನ ಬಿಂಬ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಶುಕ್ರವಾರ ಜರುಗಿತು.
ಕೃಷ್ಣ ಅಡಿಗ ಕದ್ರಿ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ ಕೋಟೆದ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೂತನ ಗರ್ಭಗುಡಿಯಲ್ಲಿ ಬಿಂಬ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ ಜರುಗಿತು. ಊರ, ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಮಧ್ಯಾಹ್ನ ದೈವಗಳ ದರ್ಶನ ಸೇವೆ, ಮಹಾಪರ್ವ, ಮಹಾಪೂಜೆ, ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜ್ಗೋಪಾಲ್ ರೈ, ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ, ಗುರಿಕಾರ ದಿನಕರ ದಡ್ಡಲ್ಕಾಡ್, ಒತ್ತು ಗುರಿಕಾರ ಹರೀಶ್ ಕೆ., ಅರ್ಚಕ ಶಂಕರ್, ಆಡಳಿತ ಮಂಡಳಿ ಅಧ್ಯಕ್ಷ ವಿಜಯ್ ಕುಮಾರ್, ಉಪಾಧ್ಯಕ್ಷ ನಾಗೇಂದ್ರ ಅಂಚನ್, ಕಾರ್ಯದರ್ಶಿ ಸುಬ್ರಮಣಿ ಎಸ್. ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಇಂದು ದೈವಗಳ ನೇಮೋತ್ಸವ
ಮಾ.23ರಂದು ಬೆಳಗ್ಗೆ 9ಕ್ಕೆ ಭಂಡಾರ ಆರೋಹಣ ಹಾಗೂ ಬಬ್ಬುಸ್ವಾಮಿ ದೈವದ ದರ್ಶನ ಸೇವೆ, ರಾತ್ರಿ 10ಕ್ಕೆ ಶ್ರೀ ಬಬ್ಬುಸ್ವಾಮಿ ಹಾಗೂ ಆದಿಮಾಯೆ ತನ್ನಿಮಾನಿಗ ದೈವಗಳ ನೇಮೋತ್ಸವ ನಡೆಯಲಿದೆ. ಮಾ.24ರಂದು ರಾತ್ರಿ 10ಕ್ಕೆ ಪಂಜುರ್ಲಿ ದೈವದ ನೇಮೋತ್ಸವ, ರಾತ್ರಿ 12ಕ್ಕೆ ರಾಹುಗುಳಿಗ ದೈವದ ನೇಮೋತ್ಸವ ಜರಗಲಿದೆ. ಮಾ.25ರಂದು ಬೆಳಗ್ಗೆ 7ಕ್ಕೆ ಭಂಡಾರ ಅವರೋಹಣ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.