ಸೇವೆ, ಜೀರ್ಣೋದ್ಧಾರ, ಗ್ರಾಮಸ್ಥರು
ಸೊರಬ: ದಾನ, ಧರ್ಮ, ಧಾರ್ಮಿಕ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದರೆ ಮಾತ್ರ ಮನುಷ್ಯನ ಬದುಕು ಸಾರ್ಥಕಗೊಳ್ಳುತ್ತದೆ ಎಂದು ಕ್ಯಾಸನೂರು ಹಾಗೂ ತೊಗರ್ಸಿ ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಹಾಲಗಳಲೆ ಗ್ರಾಮದಲ್ಲಿ ಶ್ರೀ ಈಶ್ವರ, ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ದೇವಾಲಯವನ್ನು ವಿಸರ್ಜಿಸಿ ತಾತ್ಕಾಲಿಕವಾಗಿ ಈಶ್ವರ, ಬಸವೇಶ್ವರ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಿವನಿಲ್ಲದ ದೇವಾಲಯ ಸ್ಮಶಾನಕ್ಕೆ ಸಮಾನ ಎಂಬ ಉಕ್ತಿಯಂತೆ ಪ್ರತಿ ಗ್ರಾಮದಲ್ಲಿಯೂ ಶಿವ ದೇವಾಲಯ ನಿರ್ಮಾಣದಿಂದ ಗ್ರಾಮದ ಅಭಿವೃದ್ಧಿಯಾಗುತ್ತದೆ. ಹಿರಿಯರ ಶ್ರಮದಿಂದ ನಿರ್ಮಾಣಗೊಂಡ ದೇವಾಲಯಗಳು ಪ್ರಸ್ತುತ ದಿನಗಳಲ್ಲಿ ಶಿಥಿಲಾವಸ್ಥೆ ತಲುಪಿತ್ತು. ಗ್ರಾಮಸ್ಥರೆಲ್ಲರೂ ಒಂದಾಗಿ ಕಲ್ಲಿನ ದೇವಾಲಯ ನಿರ್ಮಿಸಲು ಸಂಕಲ್ಪ ಮಾಡಿರುವುದು ದೇವರ ಇಚ್ಛೆಯಾಗಿದೆ ಎಂದರು.
ನಿತ್ಯ ಕಾಯಕದ ಜತೆ ಕರ್ಮಯೋಗಿರುವ ಮನುಷ್ಯ ಸಮಾಜ ಸುಧಾರಣೆಯ ಕೆಲಸ ಕಾರ್ಯಗಳನ್ನು ಮಾಡಿದ್ದಲ್ಲಿ ಹಿಂದಿನ ಪಾಪಗಳಿಂದ ಮುಕ್ತನಾಗಲು ಸಾಧ್ಯ. ಭಗವಂತನ ಸ್ಮರಣೆಗಾಗಿ ಒಂದು ಮಂದಿರ ಮಾಡಿಕೊಂಡರೆ ನೆಮ್ಮದಿಯ ಬದುಕನ್ನು ಕಾಣಬಹುದಾಗಿದೆ ಎಂದರು.
ಗ್ರಾಮ ಸಮಿತಿ ಅಧ್ಯಕ್ಷ ಗಣಪತಿ ಹಿತ್ಲರ್, ದೇವಾಲಯ ಸಮಿತಿ ಅಧ್ಯಕ್ಷ ಹಾಲಪ್ಪ ಗೌಡ, ಸದಸ್ಯರಾದ ಗಣಪತಿ ಹಂಡಿ, ದಾನೇಶ್, ಮಹೇಶ್, ಮಂಜಪ್ಪ ಹಂಡಿ, ಟಿ.ಪರಶುರಾಮ, ಪಿ.ಲೋಕೇಶ್, ಬಿ.ಮಂಜುನಾಥ, ರಂಗನಾಥ, ಶ್ರೀಧರ್ ಭೀಮಪ್ಪ, ಪ್ರಶಾಂತ್ಗೌಡ, ಸುಭಾಷ್, ಟೇಕಪ್ಪ, ಬಿ.ರಮೇಶ್ ಇತರರಿದ್ದರು.