ಹುಕ್ಕೇರಿ: ಅಭಿವೃದ್ಧಿ ಹೊಂದಿದ ದೇಶವೆಂದರೆ ಆರ್ಥಿಕ ಸ್ಥಿತಿಗತಿ, ಕೈಗಾರಿಕೆ ಮತ್ತು ಜೀವನಮಟ್ಟ ಅಷ್ಟೇ ಅಲ್ಲ, ಶೈಕ್ಷಣಿಕ ಚಟುವಟಿಕೆ ಮತ್ತು ಅಕ್ಷರಸ್ಥರ ಸಂಖ್ಯೆ ಗಮನಿಸಬೇಕಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ತಾಲೂಕಿನ ರಕ್ಷಿ ಗ್ರಾಮದಲ್ಲಿ 2022-23ನೇ ಸಾಲಿನ ಲೆಕ್ಕ ಶೀರ್ಷಿಕೆ ವಿವೇಕ ಯೋಜನೆಯಡಿ ನಿರ್ಮಾಣಗೊಂಡ 41.70 ಲಕ್ಷ ರೂ. ವೆಚ್ಚದ 3 ಕೊಠಡಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕ ದಿ. ಉಮೇಶ ಕತ್ತಿ ಅವರು ಶೈಕ್ಷಣಿಕ ಚಟುವಟಿಕೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಕಷ್ಟು ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದಾರೆ.
ಇದೀಗ ಶಾಸಕ ನಿಖಿಲ ಕತ್ತಿ ಸಹ ಆ ನಿಟ್ಟಿನಲ್ಲಿ 1,13,80,000 ರೂ. ವೆಚ್ಚದಲ್ಲಿ ದಾಸರಟ್ಟಿ, ರಕ್ಷಿ, ಶಿಂದಿಹಟ್ಟಿ, ಲೇಬರ್ ಕ್ಯಾಂಪ್, ಗೌಡವಾಡ ಗ್ರಾಮಗಳಲ್ಲಿ 8 ಶಾಲಾ ಕೊಠಡಿ ಮಂಜೂರು ಗೊಳಿಸಿದ್ದಾರೆಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಹುಕ್ಕೇರಿ ಕ್ಷೇತ್ರದ 571 ಅಂಗವಿಕಲ ಮಕ್ಕಳಿಗೆ ವಿವಿಧ ಸಾಮಗ್ರಿಗಳನ್ನು ವಿತರಿಸಿದರು. ಬಿಇಒ ಪ್ರಭಾವತಿ ಪಾಟೀಲ, ಬಿಆರ್ಸಿ ಅಕ್ಕಪ್ಪ ಪದ್ಮನ್ನವರ, ಪ್ರೀತಮ್ ನಿಡಸೋಶಿ, ವಿನಾಯಕ ರಜಪೂತ, ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ಹಿರಾ ಶುಗರ್ಸ್ ನಿರ್ದೇಶಕ ಬಸಪ್ಪ ಮರಡಿ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ರವಿ ಹಿಡಕಲ್, ಮುಖಂಡರಾದ ವಿಠ್ಠಲ ಪಾಟೀಲ, ಬಾಳಪ್ಪ ಘಸ್ತಿ, ಮಹೇಶ ಮಗದುಮ್ಮ, ಅಮರ ರಾಮನಕಟ್ಟಿ, ಬಾಳೇಶ ಚಂದರಗಿ, ಬಾಳಪ್ಪ ಭೀಮಣ್ಣವರ, ಬಸವರಾಜ ಮಟಗಾರ, ಆನಂದ ಲಕ್ಕುಂಡಿ ಇತರರಿದ್ದರು.