ಗಂಗಾವತಿ: ನಿರಂತರ ಅಧ್ಯಯನ ಮತ್ತು ವಿಷಯ ಮನನದಿಂದ ಕೃತಿಗಳು ಹೊರಬರಲಿದ್ದು, ಖರೀದಿಸಿ ಓದಿದಾಗ ಮಾತ್ರ ಕೃಷಿ ರಚನೆಗಾರರ ಶ್ರಮ ಸಾರ್ಥಕವಾಗಲಿದೆ ಎಂದು ಪರಿಸರ ಪ್ರೇಮಿ ವಿನೋದ ಪಾಟೀಲ್ ಹೇಳಿದರು.
ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸಮಾಜಮುಖಿ ಬರಹಗಳಿಗೆ ಸಾರ್ವಕಾಲಿಕ ಮಾನ್ಯತೆಯಿದ್ದು, ಓದುಗರೊಂದಿಗೆ ಕೃತಿ ರಚನೆಗಾರರು ಹೆಚ್ಚಾಗಬೇಕಿದೆ ಎಂದರು. ಎಸ್ಕೆಎನ್ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ, ವಾಸ್ತವಿಕತೆ ಬಿಂಬಿಸುವ ಸಾಹಿತ್ಯಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ವಿವಿಧ ಲೇಖಕರ ಕವಿ ಕಂಡ ಕನಸು, ಕನ್ನಡತಿ ಹಾಡು ಬಾ ಕೋಗಿಲೆ, ದಣಿದ ನದಿಗೊಂದು ಮಾತು, ಚಿಟ್ಟೆಗೆಣೆದ ಬಟ್ಟೆ, ಅನುದಿನ ಚಾಚಿದ ಬಿಂಬ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಸಹ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ, ವೇದಿಕೆ ತಾಲೂಕು ಅಧ್ಯಕ್ಷ ಶರಣಪ್ಪ ತಳ್ಳಿ ಕಪ್ಪಿಗುಡ್ಡ, ಪರಿಷದ್ ವಿಭಾಗೀಯ ಸಂಚಾಲಕ ಅಶೋಕಕುಮಾರ ರಾಯ್ಕರ್, ತಾಲೂಕು ಅಧ್ಯಕ್ಷ ಯಂಕಪ್ಪ ಕಟ್ಟಿಮನಿ,ಹೊಸಪೇಟೆ ಮಹಿಳಾ ಪದವಿ ಕಾಲೇಜಿನ ಗ್ರಂಥಪಾಲಕಿ ಡಿ.ಎನ್.ಸುಜಾತಾ, ಸಾಹಿತಿಗಳಾದ ನಾಗಭೂಷಣ ಅರಳಿ, ವಿಜಯಲಕ್ಷ್ಮೀ ವೈ.ಕಲಾಲ್, ಶೈಲಜಾ ಹಿರೇಮಠ, ನಿವೃತ್ತ ಸೈನಿಕ ಶಿವನಗೌಡ ತೆಗ್ಗಿ, ಶಿಕ್ಷಕರಾದ ರಮೇಶ ಬನ್ನಿಕೊಪ್ಪ, ಗುರುಪಾದಯ್ಯಹಿರೇಮಠ, ಶ್ರೀಧರ್, ಮಾಲಾಶ್ರೀಧರ್, ಯಲ್ಲಪ್ಪ ಕಲಾಲ್, ಪತ್ರಕರ್ತ ರಾಮಮೂರ್ತಿ ನವಲಿ ಇದ್ದರು. ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು.