ಕೊಪ್ಪಳ: ಕೊಪ್ಪಳ-ಕುಷ್ಟಗಿ ರಸ್ತೆಯ ಹಟ್ಟಿ ಕ್ರಾಸ್ ಬಳಿ ಅಪಘಾತದಲ್ಲಿ ಗಾಯಗೊಂಡು ಪ್ರಜ್ಞಾಹಿನ ಸ್ಥಿತಿಯಲ್ಲಿರುವ ಯುವತಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಹುಬ್ಬಳ್ಳಿ ಕಿಮ್ಸ್ಗೆ ಕರೆದೊಯ್ಯಲಾಗಿದೆ.
ಡಿ.14ರಂದು ಅಪಘಾತ ನಡೆದಿದ್ದು ಯುವತಿ ಯಾರೆಂದು ಈವರೆಗೆ ಗುರುತು ಸಿಕ್ಕಿಲ್ಲ. ಕುಟುಂಬಸ್ಥರು ಬಂದಿಲ್ಲ. ಇಷ್ಟು ದಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಸದ್ಯ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.
ಅಪಘಾತ ನಡೆದ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್ ಸಿಬ್ಬಂದಿ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಬಲ ಕಿವಿ, ಮುಖದ ಭಾಗಕ್ಕೆ ಗಾಯಗಳಾಗಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾಳೆ.
ಚಿಕಿತ್ಸೆ ನೀಡಿದರೂ ಪ್ರಜ್ಞೆ ಬಂದಿಲ್ಲ. ಹೀಗಾಗಿ ವಿವರ ಸಿಕ್ಕಿಲ್ಲ.
ತಲೆ ಭಾಗಕ್ಕೆ ಹೊಡೆತ ಬಿದ್ದಿದ್ದು ಹೆಚ್ಚಿನ ಚಿಕಿತ್ಸೆ ಅವಶ್ಯವಿದೆ. ಇಷ್ಟು ದಿನಗಳಾದರೂ ಕುಟುಂಬಸ್ಥರು ಯಾರೂ ಜಿಲ್ಲಾಸ್ಪತ್ರೆ ಅಧಿಕಾರಿಗಳನ್ನು ಸಂಪರ್ಕಿಸಿದ ಕಾರಣ ಗುರುತು ಪತ್ತೆಯಾಗಿಲ್ಲ.
ಹೆಚ್ಚಿನ ಚಿಕಿತ್ಸೆ ನೀಡಬೇಕಿದ್ದು, ಯುವತಿ ನೋಡಿಕೊಳ್ಳುವ ಜವಾಬ್ದಾರಿವಹಿಸಿಕೊಳ್ಳುವವರು ಯಾರೂ ಇಲ್ಲದ ಕಾರಣ 18ದಿನ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಟ್ಟಿದ್ದಾರೆ.
ಈ ಕುರಿತು ಮಾಧ್ಯಮದವರು ಜಿಲ್ಲಾಡಳಿತದ ಗಮನ ಸೆಳೆದ ತಕ್ಷಣ ಸ್ಪಂದಿಸಿದ ಡಿಸಿ ನಲಿನ್ ಅತುಲ್, ತಕ್ಷಣ ಯುವತಿಯನ್ನು ಹುಬ್ಬಳ್ಳಿ ಕಿಮ್ಸ್ಗೆ ಕರೆದೊಯ್ಯಲು ಸೂಚಿಸಿದ್ದಾರೆ.
ಸದ್ಯ ಯುವತಿಯನ್ನು ಕಿಮ್ಸ್ಗೆ ದಾಖಲಿಸಿದ್ದು, ಕೊಪ್ಪಳ ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಯಮುನಾ ಬೆಸ್ತರ ಧಾರವಾಡ ಸಖಿ ಕೇಂದ್ರದ ಸಿಬ್ಬಂದಿಗೆ ಮಾಹಿತಿ ನೀಡಿ ನೋಡಿಕೊಳ್ಳಲು ಮನವಿ ಮಾಡಿದ್ದಾರೆ.
ಯುವತಿ ಬಗ್ಗೆ ಮಾಹಿತಿ ಬಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ಕಳಿಸಿಕೊಟ್ಟಿದ್ದೇವೆ. ಅಲ್ಲಿನ ಸಖಿ ಒನ್ ಸ್ಟಾಪ್ ಕೇಂದ್ರದ ಅಧಿಕಾರಿಗಳು ಯುವತಿ ಚಿಕಿತ್ಸೆ ನೋಡಿಕೊಳ್ಳಲಿದ್ದಾರೆ.
-ನಲಿನ್ ಅತುಲ್. ಕೊಪ್ಪಳ ಡಿಸಿ