ಕೊಳ್ಳೇಗಾಲ : ಪಟ್ಟಣದ ಎಂ.ಜಿ.ಎಸ್.ವಿ. ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ಪ್ರೀಮಿಯರ್ ಲೀಗ್ ಸೀಸನ್ 4ರ ಜಿಲ್ಲಾ ಮಟ್ಟದ 3 ದಿನದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಭಾನುವಾರ ಪ್ರಥಮ ಬಹುಮಾನವನ್ನು ಫಿಯರ್ಲೆಸ್ ಫೈಟರ್ಸ್ ಪ್ರಜ್ವಲ್ ತಂಡ ಹಾಗೂ ದ್ವಿತೀಯ ಬಹುಮಾನವನ್ನು ಸೂಪರ್ ಸ್ಟ್ರೈಕರ್ಸ್ ಅಮರ್ ತಂಡ ಪಡೆದುಕೊಂಡಿದೆ.
ಶಾಸಕ ಎ.ಆರ್.ಕೃಷ್ಣಮೂರ್ತಿ, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ, ಮಾಜಿ ಶಾಸಕ ಎಸ್.ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ ಇತರ ಗಣ್ಯರು ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಿ ಅಭಿನಂದಿಸಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಮ್ಮ ಜಿಲ್ಲೆ ಜಾನಪದ ಕಲೆಯ ತವರಾಗಿದೆ. ಅಂತೆಯೇ, ಕೊಳ್ಳೇಗಾಲದಲ್ಲಿ ಹೆಚ್ಚಾಗಿ ಕಲಾವಿದರಿದ್ದರೆ, ಯುವಕರು ಕ್ರೀಡೆಯಲ್ಲಿ ಬಹಳ ಉತ್ಸುಕರಾಗಿದ್ದಾರೆ. ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಗೆದ್ದವರಿಗೆ ಪ್ರಥಮ ಬಹುಮಾನವಾಗಿ ಆಕರ್ಷಕ ಟ್ರೋಫಿ ಮತ್ತು 75 ಸಾವಿರ ರೂ. ನಗದು ಬಹುಮಾನ ಹಾಗೂ ದ್ವಿತೀಯ ಬಹುಮಾನ ಆಕರ್ಷಕ ಟ್ರೋಫಿ ಮತ್ತು 50 ಸಾವಿರ ರೂ. ನಗದು ಬಹುಮಾನವನ್ನು ನೀಡಲಾಗಿದೆ. ಇಂತಹ ದೊಡ್ಡ ಮಟ್ಟದ ಪಂದ್ಯಾವಳಿ ನಡೆದಿರುವುದು ನಿಜಕ್ಕೂ ಶ್ಲಾಘಿಸುವ ವಿಚಾರ. ಇವೆಲ್ಲವು ಚಾಮರಾಜನಗರ ಜನರು ಜಿಲ್ಲೆ ಕಲೆ, ಸಾಹಿತ್ಯ, ಕ್ರೀಡೆಗೆ ಹೆಸರುವಾಸಿ ಆಗಿರುವುದನ್ನು ಸಾಕ್ಷೀಕರಿಸುತ್ತದೆ ಎಂದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಐಪಿಎಲ್ ಕ್ರಿಕೆಟ್ ಪಂದ್ಯದಂತೆ ಡಾ.ಅಂಬೇಡ್ಕರ್ ಅವರ ಹೆಸರಿರಲ್ಲಿ ಎಪಿಎಲ್ ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿರುವ ಪ್ರಜ್ವಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿ ವರ್ಷವೂ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುತ್ತಿರುವುದು ಸಂತಸದ ವಿಚಾರ ಎಂದರು.
ಆರೋಗ್ಯ ಶಿಬಿರಕ್ಕೆ ಬನ್ನಿ: ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸರ್ಕಾರ ಇದೇ ತಿಂಗಳ 22ರಂದು ಎಂ.ಜಿ.ಎಸ್.ವಿ. ಜೂನಿಯರ್ ಕಾಲೇಜು ಆವರಣದಲ್ಲಿ ಬೃಹತ್ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಕೊಳ್ಳೇಗಾಲ ಹಾಗೂ ಹನೂರು ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ಕೆಎಂಎಫ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ, ಉಪ್ಪಾರ ನಿಗಮದ ರಾಜ್ಯ ಮಾಜಿ ಅಧ್ಯಕ್ಷ ಶಿವಕುಮಾರ್, ಪ್ರಥಮ ದರ್ಜೆ ಗುತ್ತಿಗೆದಾರ ಓಲೆ ಮಹದೇವ ನಗರಸಭೆ ಮಾಜಿ ಅಧ್ಯಕ್ಷೆ ರೇಖಾ ರಮೇಶ್ ಮತ್ತಿತರರಿದ್ದರು.