ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಗ್ರಾಮಸಭೆ ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆಯಲ್ಲಿ ಬುಧವಾರ ಸಾರ್ವಜನಿಕ ಸಮುದಾಯ ಭವನದಲ್ಲಿ ನಡೆಯಿತು.
ಹಿರಿಯ ಗ್ರಾಮಸ್ಥ ಸಿ.ಕೆ.ಚಂದ್ರಶೇಖರ್ ಮಾತನಾಡಿ, ಪ್ರತಿ ಬಾರಿಯೂ ಗ್ರಾಮಸಭೆಗೆ ವಿರಳ ಸಂಖ್ಯೆಯಲ್ಲಿ ಅಧಿಕಾರಿಗಳು ಭಾಗವಹಿಸುತ್ತಾರೆ. ಹೀಗಾದರೆ ಸಮಸ್ಯೆಗಳನ್ನು ನಾವು ಯಾರ ಬಳಿ ಹೇಳಿಕೊಳ್ಳುವುದು ಎಂದು ಪ್ರಶ್ನಿಸಿದರಲ್ಲದೆ, ಸಭೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.
ಇದಕ್ಕುತ್ತರಿಸಿದ ಪಿಡಿಒ ಹರೀಶ್, ಎಲ್ಲ ಇಲಾಖೆಗಳ ಅಧಿಕಾರಿಗಳಿಗೂ ಗ್ರಾಪಂನಿಂದ ಆಹ್ವಾನ ಪತ್ರ ನೀಡಲಾಗಿತ್ತು. ಆದರೆ ಕೆಲವು ಅಧಿಕಾರಿಗಳಿಗೆ ಬೇರೆ ಬೇರೆ ಕಾರ್ಯಕ್ರಮಗಳಿರುವುದರಿಂದ ಗ್ರಾಮಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಸಭೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಕಂದಾಯ ಇಲಾಖೆಯ ಸೇವೆ ಸೌಲಭ್ಯಗಳ ಬಗ್ಗೆ ಶನಿವಾರಸಂತೆ ಕಂದಾಯ ಅಧಿಕಾರಿ ವಾಣಿ ಮಾಹಿತಿ ನೀಡಿದರು. ಅರಣ್ಯ ಇಲಾಖೆಯಿಂದ ಜೂನ್ -ಜುಲೈ ತಿಂಗಳಲ್ಲಿ ಗಿಡಗಳ ವಿತರಣೆ, ಕಾಡಾನೆ ನಿಯಂತ್ರಣಕ್ಕೆ ಸೋಲಾರ್ ಬೇಲಿ ಅಳವಡಿಸಲು ಇಲಾಖೆಯಿಂದ ದೊರೆಯುವ ಸಬ್ಸಿಡಿ ವ್ಯವಸ್ಥೆ ಬಗ್ಗೆ ಉಪ ವಲಯಧಿಕಾರಿ ಎಂ.ವಿ.ಸೂರ್ಯ ಮಾಹಿತಿ ನೀಡಿದರು. ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಅಭಿಯಂತರ ಲೋಕೇಶ್ ಹಾಗೂ ಗ್ರಾಮೀಣ ರಸ್ತೆ ಯೋಜನೆ, ಶಿಕ್ಷಣ, ವಿದ್ಯುತ್ ಇನ್ನು ಮುಂತಾದ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಆದರೆ ಗ್ರಾಮಸಭೆಯಲ್ಲಿ ಯಾವುದೆ ವಿಷಯಗಳ ಮೇಲೆ ಚರ್ಚೆ ನಡೆಯದೆ ನೀರಸವಾಗಿ ಅಂತ್ಯ ಕಂಡಿತು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಚಂದ್ರಮೋಹನ್, ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.