ಸವಣೂರ: ಬಡವರಿಗೆ ಆರೋಗ್ಯದ ಅರಿವು ಮೂಡಿಸುವುದರೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದು ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿಯ ಡಾಕ್ಟರ್ ಅಗರ್ವಾಲ್ ಆಸ್ಪತ್ರೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮೆಗಾ ಹೆಲ್ತ್ ಕ್ಯಾಂಪ್ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ದೇಹದ ಪ್ರತಿಯೊಂದು ಅಂಗಾಗವೂ ಮಹತ್ವ ಪಡೆದಿವೆ. ನಿರಂತರ ಒತ್ತಡದ ಬದುಕು ಸಾಗಿಸುತ್ತಿರುವ ಸಂದರ್ಭದಲ್ಲಿ ಆರೋಗ್ಯದ ಕುರಿತು ಜಾಗೃತಿ ಹೊಂದಲು ಬಡ ಕುಟುಂಬಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಸೂಕ್ತ ವೇದಿಕೆಯಾಗಿವೆ ಎಂದರು.
ಮಾಜಿ ಶಾಸಕ ಅಜೀಮಪೀರ್ ಖಾದ್ರಿ ಮಾತನಾಡಿ, ಶಿಗ್ಗಾಂವಿ-ಸವಣೂರ ಕ್ಷೇತ್ರದ ಸಾರ್ವಜನಿಕರ ಆರೋಗ್ಯ ಕಾಳಜಿಯಿಂದ ಉನ್ನತ ಮಟ್ಟದಲ್ಲಿ ಹೆಸರು ಪಡೆದಿರುವ ಪ್ರತಿಷ್ಠಿತ ಸಂಸ್ಥೆಗಳು ಆರೋಗ್ಯ ಶಿಬಿರ ಏರ್ಪಡಿಸಿರುವುದು ಸಂತಸ ತಂದಿದೆ. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಡಾ. ಅಗರ್ವಾಲ್ ಕಣ್ಣಿನ ಅಸ್ಪತ್ರೆ ಹುಬ್ಬಳ್ಳಿಯ ಜಾಯಿಂಟ್ ಮೆಡಿಕಲ್ ಡೈರಕ್ಟರ್ ಡಾ. ಶ್ರೀಕೃಷ್ಣ ನಾಡಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿ ಸವಣೂರ ಮಂಡಲ ಅಧ್ಯಕ್ಷ ಗಂಗಾಧರ ಬಾಣದ, ಬಂಕಾಪುರದ ಡಾ. ಆರ್.ಎಸ್.ಅರಳೀಮಠ ಮಾತನಾಡಿದರು.
ಚನ್ನು ಪಾಟೀಲ, ಟಿಎಚ್ಒ ಡಾ. ಚಂದ್ರಕಲಾ ಬಸ್ತಿ, ಟಿಎಚ್ಒ ಸತೀಶ ಎ.ಆರ್., ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ವಿಜಯಕುಮಾರ, ಡಾ. ಪ್ರವೀಣಕುಮಾರ ಸಿಂಧೂರ, ಡಾ. ಪ್ರಭು ಪಾಟೀಲ, ಡಾ.ಶೋಭಾ ನಿಸ್ಸೀಮಗೌಡ್ರ ಹಾಗೂ ಇತರರು ಪಾಲ್ಗೊಂಡಿದ್ದರು.
ಆಸ್ಪತ್ರೆಯ ಆಡಳಿತಾಧಿಕಾರಿ ವಿಜಯಕುಮಾರ ಹಾಗೂ ಪತ್ರಕರ್ತ ಶರಣಬಸವ ಕಾರ್ಯಕ್ರಮ ನಿರ್ವಹಿಸಿದರು.
20ಕ್ಕೂ ಹೆಚ್ಚಿನ ವೈದ್ಯರು 200ಕ್ಕೂ ಹೆಚ್ಚು ರೋಗಿಗಳ ತಪಾಸಣೆ ಕೈಗೊಂಡರು.