ಶಿರಾಳಕೊಪ್ಪ: ಮನುಷ್ಯ ಧರ್ಮದ ನೆರಳಿನಲ್ಲಿ ನಡೆಯಬೇಕು. ಧರ್ಮದ ಸಾರ ತಿಳಿಯಬೇಕು. ಧರ್ಮ ಉಳಿಸುವ ಶ್ರೇಷ್ಠ ಕಾರ್ಯವನ್ನು ಧರ್ಮಸ್ಥಳದ ಶ್ರೀಕ್ಷೇತ್ರ ಮಾಡುತ್ತಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಸಮೀಪದ ಬಸವನಂದಿಹಳ್ಳಿ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಶಿಕಾರಿಪುರ, ಲಯನ್ಸ್ ಕ್ಲಬ್ ಶಿರಾಳಕೊಪ್ಪ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತನ್ನ ಜವಾಬ್ದಾರಿಯ ಅರಿವನ್ನು ಮೂಡಿಸಿ ಕ್ರಾಂತಿಕಾರಕ ಕೆಲಸ ಮಾಡುತ್ತಿದೆ. ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಕೆಲಸ ಆಗುತ್ತಿದೆ. ಈ ಕಾರ್ಯ ನಾಡಿನ ಉದ್ದಗಲಕ್ಕೂ ನಡೆಯುತ್ತಿದೆ ಎಂದರು.
ಗ್ರಾಮೀಣ ಜನರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಗ್ರಾಮಾಭಿವೃದ್ಧಿ ಯೋಜನೆಗಳು ಪೂರಕ. ಕುಡಿತದಿಂದ ಇಡೀ ಕುಟುಂಬ ನಾಶವಾಗುತ್ತದೆ. ಮದ್ಯವರ್ಜನ ಶಿಬಿರದಿಂದ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಟ್ಟಂತಾಗಿದೆ. ಮನುಷ್ಯ ತನ್ನ ದೌರ್ಬಲ್ಯಗಳನ್ನು ಮೆಟ್ಟಿ ನಿಂತಾಗ ಜೀವನದಲ್ಲಿ ಗೆಲ್ಲಲು ಸಾಧ್ಯ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನಿರ್ದೇಶಕ ಬಾಬು ನಾಯ್ಕ ಮಾತನಾಡಿ, ಜನಜಾಗೃತಿ ವೇದಿಕೆ ಸಹಕಾರದಿಂದ ಈವರೆಗೆ 1737ನೇ ಮದ್ಯವರ್ಜನ ಶಿಬಿರ ನಡೆಸಲಾಗಿದೆ. ಇದರಿಂದ ಲಕ್ಷಾಂತರ ಜನರನ್ನು ಕುಡಿತದ ದುಶ್ಚಟದಿಂದ ಬಿಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರಲಾಗಿದೆ ಎಂದು ಹೇಳಿದರು. ಸಾನ್ನಿಧ್ಯವನ್ನು ಹಿರೇಮಾಗಡಿಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಮುರುಘರಾಜೇಂದ್ರ ಸ್ವಾಮೀಜಿ ವಹಿಸಿದ್ದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಮದ್ಯವರ್ಜನ ಶಿಬಿರ ಸಮಿತಿ ಅಧ್ಯಕ್ಷ ಯೋಗಿರಾಜ್, ಗೌರವ ಅಧ್ಯಕ್ಷ ಲಯನ್ ಗಿರೀಶ್, ಕೆ.ರೇವಣಪ್ಪ, ನಿವೇದಿತಾ ರಾಜು, ಸಣ್ಣ ಹನುಮಂತಪ್ಪ, ಚನ್ನವೀರ ಶೆಟ್ಟಿ ಇತರರಿದ್ದರು
ಧರ್ಮದ ತಳಹದಿಯಲ್ಲಿ ಬದುಕು ಸಾಗಿಸಿ
ಬಸವನಂದಿಹಳ್ಳಿಯಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಶಾಸಕ ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು. ಶ್ರೀ ಶಿವಮೂರ್ತಿ ಶಿವಾಚಾರ್ಯ ಮುರುಘರಾಜೇಂದ್ರ ಸ್ವಾಮೀಜಿ, ಕೆ.ಎಸ್.ಗುರುಮೂರ್ತಿ, ದುಗ್ಗೇಗೌಡ, ಯೋಗಿರಾಜ್, ನಿವೇದಿತಾ ರಾಜು ಇತರರಿದ್ದರು.