ಕಾರವಾರ:ತಕ್ಷಣ ಬ್ಯಾಂಕ್ ಖಾತೆ ಚಾಲ್ತಿ ಮಾಡದೇ ಇದ್ದರೆ ಜಿಲ್ಲೆಯ 39,043 ಕುಟುಂಬಗಳಿಗೆ ರಾಜ್ಯ ಸರ್ಕಾರ ನೀಡುವ ಅನ್ನಭಾಗ್ಯದ ಹೆಚ್ಚುವರಿ ಹಣ ಲಭ್ಯವಾಗದು.
ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಹಾಗೂ ಅಂತ್ಯೋದಯ ಕುಟುಂಬಗಳ ಪ್ರತಿ ಸದಸ್ಯನಿಗೆ ಹೆಚ್ಚುವರಿ ಐದು ಕೆಜಿ ಅಕ್ಕಿಯ ಮೌಲ್ಯ 170 ರೂ.ಗಳಂತೆ ಹಣವನ್ನು ಮನೆಯ ಯಜಮಾನನ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜಮಾ ಮಾಡುವುದಾಗಿ ಘೋಷಿಸಿದೆ.
ಈ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರಕಿದ್ದು, ಜಿಲ್ಲೆಯ ಸುಮಾರು 2.71 ಲಕ್ಷ ಪಡಿತರ ಕುಟುಂಬಗಳಿಗೆ ಶೀಘ್ರ ಹಣ ಜಮಾ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಚಂದ್ರಯಾನ-3 ತಂಡದಲ್ಲಿ ಉತ್ತರ ಕನ್ನಡದ ಇಂಜಿನಿಯರ್
ಜಿಲ್ಲೆಯಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿದ 3.10 ಲಕ್ಷ ಕುಟುಂಬಗಳಿದ್ದು, ಅದರಲ್ಲಿ 9,756 ಕುಟುಂಬಗಳ ಯಜಮಾನನ ಬ್ಯಾಂಕ್ ಖಾತೆ ಚಾಲ್ತಿಯಲ್ಲಿಲ್ಲ.
29,258 ಕುಟುಂಬಗಳ ಬ್ಯಾಂಕ್ ಖಾತೆಯ ಮಾಹಿತಿ ಆಹಾರ ಇಲಾಖೆಯ ಬಳಿ ಲಭ್ಯವೇ ಇಲ್ಲ.
ಇನ್ನು 29 ಕುಟುಂಬಗಳ ಯಜಮಾನರ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ. ನೇರ ಪ್ರಯೋಜನ ವರ್ಗಾವಣೆ (ಡಿಬಿಟಿ) ಎಂಬುದು ಆಧಾರ ಸಂಖ್ಯೆ ಆಧಾರಿತವಾಗಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವ ವ್ಯವಸ್ಥೆಯಾಗಿದೆ. ಇದರಿಂದ ಈ ಎಲ್ಲ ಸೇರಿ 39,043 ಕುಟುಂಬಗಳಿಗೆ ಈ ಬಾರಿ ಅನ್ನ ಭಾಗ್ಯದ ಹಣ ಲಭ್ಯವಾಗದು.
18 ಕೋಟಿ ರೂ. ಬೇಕು.
ಜಿಲ್ಲೆಯಲ್ಲಿ 10.99 ಲಕ್ಷ ಅಂತ್ಯೋದಯ ಹಾಗೂ ಬಿಪಿಎಲ್ ಫಲಾನುಭವಿಗಳಿದ್ದಾರೆ. ಪ್ರತಿಯೊಬ್ಬರಿಗೆ 170 ರೂ.ನಂತೆ ಸರಾಸರಿ ಸುಮಾರು 18.69 ಲಕ್ಷ ರೂ.ಗಳನ್ನು ಪ್ರತಿ ತಿಂಗಳು ಜಮಾ ಮಾಡಬೇಕಾಗಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.
- ಪಡಿತರಚೀಟಿದಾರರ ಬ್ಯಾಂಕ್ ಖಾತೆಯ ಡೇಟಾವನ್ನು ಎನ್ಐಸಿಗೆ ಈಗಾಗಲೇ ಕಳಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
- ತಾಲೂಕು ಪ್ರಯೋಜನ ವಂಚಿತ ಪಡಿತರ ಚೀಟಿದಾರರು
- ಅಂಕೋಲಾ 2480
- ಭಟ್ಕಳ 3877
- ದಾಂಡೇಲಿ 2587
- ಹಳಿಯಾಳ 4268
- ಹೊನ್ನಾವರ 4655
- ಕಾರವಾರ 3538
- ಕುಮಟಾ 4038
- ಮುಂಡಗೋಡ 2579
- ಸಿದ್ದಾಪುರ 2282
- ಶಿರಸಿ 4769
- ಜೊಯಿಡಾ 1859
- ಯಲ್ಲಾಪುರ 2111
- ಬ್ಯಾಂಕ್ ಖಾತೆಗಳ ಮಾಹಿತಿ ಇಲ್ಲದ ಅಥವಾ ಆಧಾರ ಲಿಂಕ್ ಆಗಿರದ ಪಡಿತರ ಚೀಟಿದಾರರ ಮಾಹಿತಿಯನ್ನು ಈಗಾಗಲೇ ಆಯಾ ತಹಸೀಲ್ದಾರರ ಮೂಲಕ ನ್ಯಾಯಬೆಲೆ ಅಂಗಡಿಗಳಿಗೆ ಕಳಿಸಿಕೊಡಲಾಗಿದೆ. ಪಡಿತರದಾರರು ಅದನ್ನು ಪರಿಶೀಲನೆ ನಡೆಸಿ, ಜು.20 ರೊಳಗೆ ಬ್ಯಾಂಕ್ ಖಾತೆ ತೆರೆಯಬೇಕು. ಅಥವಾ ತಮ್ಮ ಹಳೆಯ ಬ್ಯಾಂಕ್ ಅಥವಾ ಅಂಚೆ ಖಾತೆಯನ್ನು ಊರ್ಜಿತ ಮಾಡಿಕೊಳ್ಳಬೇಕು. ಅದಕ್ಕೆ ಆಧಾರ ಲಿಂಕ್ ಆಗುವಂತೆ ನೋಡಿಕೊಳ್ಳಬೇಕು. ಹಾಗೆ ಮಾಡಿದಲ್ಲಿ ಆಗಸ್ಟ್ ತಿಂಗಳಲ್ಲಿ ಅವರ ಖಾತೆಗಳಿಗೂ ಹಣ ಜಮಾ ಆಗಲಿದೆ.
- ಮಂಜುನಾಥ ರೇವಣಕರ್
- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ