ಹಗರಿಬೊಮ್ಮನಹಳ್ಳಿ: ಹಿಂದುಗಳಿಗೆ ರಕ್ಷಣೆ ಹಾಗೂ ದೇಶಾದ್ಯಂತ ವಕ್ಫ್ಬೋರ್ಡ್ ಕಾಯ್ದೆ ರದ್ದುಗೊಳಿಸುವಂತೆ ಒತ್ತಾಯಿಸಿ ಹಿಂದು ಜನಜಾಗೃತಿ ಸಮಿತಿ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿಗೆ ಮನವಿ ಸಲ್ಲಿಸಿದರು.
ಸಮಿತಿ ಸಂಚಾಲಕಿ ಸಂಗೀತಾ ಜನ್ನು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಹಿಂದು ಪರ ಸಂಘಟನೆ ಕಾರ್ಯಕರ್ತರ ಗುರಿಯಾಗಿಸಿಕೊಂಡು ವಿವಿಧ ರೀತಿಯ ಆಕ್ರಮಣಗಳು ಹೆಚ್ಚಾಗಿವೆ. ಹಿಂದು ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿ, ಅವರನ್ನು ಥಳಿಸುವುದು ಮತ್ತು ಭಯ ಪಡಿಸುವ ಪ್ರಕ್ರಿಯೆ ನಡೆಯುತ್ತಿವೆ.
ಯುವ ಬ್ರಿಗೇಡ್ನ ವೇಣುಗೋಪಾಲ ಹತ್ಯೆ ಸೇರಿ ಹಲವು ಘಟನೆಗಳು ಭಯದ ವಾತಾವರಣ ಸೃಷ್ಟಿಸಿವೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ನಾಗರಕಟ್ಟೆ ಪೂಜೆಗೆ ಪೊಲೀಸರು ನೋಟಿಸ್ ಜಾರಿ ಮಾಡಿರುವುದು, ಬಕ್ರೀದ್ ವೇಳೆಯಲ್ಲಿ ಬಾದಾಮಿ, ಶಿಕಾರಿಪುರ, ಶಿರಸಿ ಸೇರಿ ಹಲವೆಡೆ ಅಕ್ರಮವಾಗಿ ಗೋಹತ್ಯೆ ಮಾಡಿ, ಗೋವಿನ ಮೂಳೆಗಳನ್ನು ದೇವಸ್ಥಾನ, ಮನೆಗಳ ಮುಂದೆ ಎಸೆಯಲಾಗಿದೆ. ಆದ್ದರಿಂದ ಹಿಂದು ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು. ಆಕ್ರಮಣ ಮಾಡುವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಿಜೆಪಿ ಅಧಿಕಾರದಲ್ಲಿದ್ದರೆ ಹಿಂದುಗಳಿಗೆ ರಕ್ಷಣೆ ಇಲ್ಲ : ಡಾ. ಯತೀಂದ್ರ ಸಿದ್ದರಾಮಯ್ಯ
ವಕೀಲ ಚಂದ್ರಶೇಖರ್ ಮಾತನಾಡಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ, ಖಾಸಗಿ ಜಮೀನುಗಳನ್ನು ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಇದರಿಂದ ದೇಶದಲ್ಲಿ 8 ಲಕ್ಷ ಎಕರೆ ಜಮೀನನ್ನು ಕಬಳಿಸಿದೆ. ಈ ಕಾನೂನನ್ನು ರದ್ದುಗೊಳಿಸಿ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಬೇಕು ಎಂದು ಒತ್ತಾಯಿಸಿದರು.
ವಕೀಲ ಕೊಟ್ರೇಶ ಶೆಟ್ಟರ, ಬಾವಿ ಪ್ರಕಾಶ್, ಪ್ರಮುಖರಾದ ಚನ್ನಪ್ಪ ಒಡೆಯರ್, ರಮೇಶ ಕುಮಾರ, ಚಿಂತ್ರಪಳ್ಳಿ ನಾಗರಾಜ, ಪ್ರಮೋದ ಮೇಘರಾಜ್, ದೀಪಕ್ ಕಠಾರೆ, ಪರಶುರಾಮ ದಲಬಂಜನ್, ಕೊಟ್ರೇಶ್, ಸರ್ದಾರ ಯಮನೂರು, ಡಿ.ವಿಜಯಕುಮಾರ್, ಪೂಜಾರಪ್ಪ, ದೊಡ್ಡಬಸಪ್ಪ ಇತರರಿದ್ದರು.