ಮೈಸೂರು: ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಹಿಂದುಗಳ ಹತ್ಯೆಯಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪೊಳ್ಳು ಹಿಂದುಗಳು, ನಾವು ನಿಜವಾದ ಹಿಂದುಗಳು. ಸಿದ್ದರಾಮಯ್ಯ ಕಾಲದಲ್ಲಿ ಹಿಂದುಗಳ ಹತ್ಯೆ ನಡೆದಿಲ್ಲ. ಬಿಜೆಪಿಯವರು ಹಿಂದುಗಳ ಹತ್ಯೆ ಮಾಡಿಸಿ ರಾಜಕಾರಣ ಮಾಡುತ್ತಾರೆ. ಬಿಜೆಪಿ ಕೋಮುವಾದದ ರಾಜಕೀಯ ಮಾಡುತ್ತಿದ್ದು, ಧರ್ಮ ಬಿಟ್ಟು ರಾಜಕೀಯ ಮಾಡಲು ಅವರಿಗೆ ಬರುವುದಿಲ್ಲ. ಧರ್ಮ ಧರ್ಮವನ್ನು ಎತ್ತಿಕಟ್ಟಿ ರಾಜಕೀಯ ಲಾಭ ಪಡೆಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹಿಂದುಗಳಿಗೆ ರಕ್ಷಣೆ ಕೊಡುವುದಿಲ್ಲ, ಶಾಂತಿ ನೆಮ್ಮದಿ ಇರಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನರಮೇಧ, ಗಲಭೆ ಮಾಡುವುದು ಬಿಜೆಪಿಯವರ ಕೆಲಸ. ಈ ವಿಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಗಳಿಗೆ ತೊಂದರೆ ಇಲ್ಲ ಎಂದು ಹೇಳಿದರು.