ಕೂಡ್ಲಿಗಿ: ವಿಷಯಾಧಾರಿತ ಚಿತ್ರಗಳನ್ನು ಬಿಡಿಸಿ ಚುನಾವಣೆ ವೇಳೆ ಹೆಚ್ಚಿನ ಮತದಾರರನ್ನು ಆಕರ್ಷಿಸುವ ಯತ್ನ ಮಾಡಲಾಗುತ್ತಿದೆ ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ತಾಪಂ ಇಒ ವೈ.ರವಿಕುಮಾರ್ ತಿಳಿಸಿದ್ದಾರೆ.
ಚಿತ್ರಕಲೆಯಿಂದ ಮತ ಕೇಂದ್ರಗಳನ್ನು ಶೃಂಗಾರ ಮಾಡುವುದರ ಜತೆಗೆ ಸ್ಥಳೀಯ ಸಂಸ್ಕೃತಿ ಹಾಗೂ ಸಂಪ್ರದಾಯ ಉತ್ತೇಜಿಸುವ ಕಾರ್ಯ ನಡೆಸಲಾಗುತ್ತಿದೆ. ಬುಡಕಟ್ಟು ಜನರ ಕಲೆಯಾದ ವರ್ಲೆ ಚಿತ್ರಗಳನ್ನು ಹೆಚ್ಚಾಗಿ ಬಿಡಿಸಲಾಗುತ್ತಿದ್ದು, ಇದು ಮೂಲ ಜ್ಯಾಮಿತಿಯ ಆಕಾರಗಳ ಒಂದು ಗುಂಪಾಗಿದೆ. ವೃತ್ತ, ತ್ರಿಕೋನ ಮತ್ತು ಚೌಕಾಕಾರದಲ್ಲಿ ಇರುತ್ತದೆ. ಇದರ ಜತೆಗೆ ಗುಡೇಕೋಟೆಯ ಕರಡಿಧಾಮ, ಹಂಪಿಯ ಕಲ್ಲಿನ ರಥ, ತುಂಗಭದ್ರಾ ಅಣೆಕಟ್ಟು ಸೇರಿ ಸ್ಥಳೀಯ ಭಾಗದ ವಿವಿಧ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ತಾಲೂಕಿನ ಚಿರತಗುಂಡು ಗ್ರಾಮದ ಬಸವೇಶ್ವರ ಪ್ರೌಢ ಶಾಲೆಯ ಚಿತ್ರಕಲೆ ಶಿಕ್ಷಕ ವೀರನಗೌಡ ಫಲಾಪೇಕ್ಷೆ ಇಲ್ಲದೆ ಈ ಚಿತ್ರಗಳನ್ನು ಬಿಡಿಸುವ ಹೊಣೆ ಹೊತ್ತಿದ್ದಾರೆ. ಅವರ ಶಿಷ್ಯರಾದ ಭಾಷಾ ಡಿ., ಹನುಮಂತು, ನಟರಾಜ ಕೈಜೊಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.