ಮುಳಬಾಗಿಲು: ಬೆಳಗಾವಿ ಅಧಿವೇಶನದಲ್ಲಿ ವಕೀಲರ ಹಿತರಕ್ಷಣೆ ಕಾಯ್ದೆಯನ್ನು ಮಂಡನೆಗೆ ಆಗ್ರಹಿಸಿ ತಾಲೂಕು ವಕೀಲರ ಸಂದ ವತಿಯಿಂದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟಿಸಿ ಉಪತಹಸೀಲ್ದಾರ್ ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ವಕೀಲರ ಸಂದ ಅಧ್ಯಕ್ಷ ಪಿ.ಎಂ. ಸದಾಶಿವಯ್ಯ ಮಾತನಾಡಿ, ವಕೀಲರಿಗೆ ಸೂಕ್ತವಾದ ರಕ್ಷಣೆ ಇಲ್ಲದಂತಾಗಿದೆ. ಈಗಾಗಲೇ ಹಲವಾರು ಕಡೆ ವಕೀಲರ ಕೊಲೆ, ಬೆದರಿಕೆ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸರ್ಕಾರವು ಈ ಬಗ್ಗೆ ಗಮನಹರಿಸದಿರುವುದು ವಿಪರ್ಯಾಸ ಎಂದರು.
ಗೌರವಾಧ್ಯಕ್ಷ ಎಂ.ಎಸ್.ಶ್ರೀನಿವಾಸ್ ರೆಡ್ಡಿ ಮಾತನಾಡಿ, ಸಾರ್ವಜನಿಕರಿಗೆ ನ್ಯಾಯವನ್ನು ಕೊಡಿಸುವ ವಕೀಲರು ನ್ಯಾಯಕ್ಕಾಗಿ ಬೀದಿಗೆ ಬಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ದರಿಂದ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವು ವಕೀಲರ ಹಿತರಕ್ಷಣಾ ಕಾಯ್ದೆ ಮಸೂದೆ ಮಂಡಿಸಿ ಅಂಗೀಕರಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ವಕೀಲರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಕೀಲರ ಸಂದ ಕಾರ್ಯದರ್ಶಿ ನಾರಾಯಣಸ್ವಾಮಿ, ಉಪಾಧ್ಯಕ್ಷ ಎಂ.ಬಿ. ಧರ್ಮರಾಜ್, ಜಂಟಿ ಕಾರ್ಯದರ್ಶಿ ಬಿ. ಸುಬ್ರಮಣ್ಯ, ಖಜಾಂಚಿ ಎನ್.ಸಂತೋಷ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ರಾಧಿಕಾ, ಸಿ.ಎಂ. ನಯಾಜ್, ಬಿ.ವಿ. ವೆಂಕಟೇಶ್, ಎಂ.ಎಸ್.ಕೃಷ್ಣಮೂರ್ತಿ, ಚಂದ್ರಶೇಖರ್, ಪೂಜಾರಿ, ಎಂ.ರಮೇಶ್, ಎಸ್.ಎನ್.ಗುರುಮೂರ್ತಿ, ಎಸ್.ಮಣಿಕಂಠ ರಾಜೇಂದ್ರ ಪ್ರಸಾದ್ ಮತ್ತಿತರರು ಇದ್ದರು.