ಕಾಸರಗೋಡು: ಸಿಂಹಮಾಸದ ಪೂಜೆಗೆ ಶಬರಿಮಲೆ ಕ್ಷೇತ್ರ ತೆರೆದುಕೊಂಡಿದೆ. ಬುಧವಾರ ಬೆಳಗ್ಗೆ 5 ಗಂಟೆಗೆ ಮೇಲ್ಶಾಂತಿ ಎನ್.ಪರಮೇಶ್ವರನ್ ನಂಬೂದಿರಿ ದೇವಸ್ಥಾನದ ಗರ್ಭಗೃಹದ ಬಾಗಿಲು ತೆರೆದು ದೀಪ ಬೆಳಗಿಸಿದರು.
ಅನಂತರ ನಿರ್ಮಾಲ್ಯ ದರ್ಶನ ಹಾಗೂ ಅಭಿಷೇಕ ನೆರವೇರಿತು. ಚಿನ್ನದ ಕುಂಡದಲ್ಲಿ ತುಪ್ಪದ ಅಭಿಷೇಕದ ನಂತರ ತಂತ್ರಿ ಕಂಠರರ್ ರಾಜೀವರ್ ಭಕ್ತರಿಗೆ ಅಭಿಷೇಕ ತೀರ್ಥ ಹಾಗೂ ಪ್ರಸಾದ ನೀಡಿದರು. ನಂತರ ಮಂಟಪದಲ್ಲಿ ಮಹಾಗಣಪತಿ ಹೋಮ ನಡೆದು ಶಬರಿಮಲೆಯ ನೂತನ ಕೀಲ್ಶಾಂತಿ ನೇಮಕಕ್ಕೆ ಚೀಟಿ ಎತ್ತಲಾಯಿತು. ವಿ.ಎನ್.ಶ್ರೀಕಾಂತ್ ಶಬರಿಮಲೆಯ ನೂತನ ಸಹಾಯಕ ಅರ್ಚಕರಾಗಿ ನೇಮಕಗೊಂಡರು. ದೇವಸ್ವಂ ಕಮಿಷನರ್ ಬಿ.ಎಸ್.ಪ್ರಕಾಶ್ ಉಸ್ತುವಾರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಿಂಹ ಮಾಸದ ಪ್ರಥಮ ದಿನ ಶಬರಿಮಲೆಯಲ್ಲಿ ಲಕ್ಷಾರ್ಚನೆ ನಡೆಯಿತು. ಕ್ಷೇತ್ರದಲ್ಲಿ ಮುಂದಿನ ಐದು ದಿನ ಉದಯಾಸ್ತಮಾನ ಪೂಜೆ, ಕಲಶಾಭಿಷೇಕ, ಅಷ್ಟಾಭಿಷೇಕ, ಪಡಿಪೂಜೆ, ಪುಷ್ಪ್ಪಾಭಿಷೇಕ ನೆರವೇರಲಿದೆ. 21ರಂದು ರಾತ್ರಿ 10ಕ್ಕೆ ಹರಿವರಾಸನಂ ಹಾಡುವ ಮೂಲಕ ಪೂಜೆ ಮುಕ್ತಾಯಗೊಂಡು ಗರ್ಭಗೃಹದ ಬಾಗಿಲು ಮುಚ್ಚಲಾಗುವುದು.
ಓಣಂ ದಿನದ ಪೂಜೆಗಳಿಗಾಗಿ ಸೆ.6ರಂದು ಮತ್ತೆ ಗರ್ಭಗೃಹ ತೆರೆದು, ಸೆ.10ರಂದು ಗರ್ಭಗೃಹ ಮುಚ್ಚಲಿದೆ.